ಲಕ್ನೋ, ಮಾ.06 (DaijiworldNews/AA): ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಸಂಪರ್ಕ ಹೊಂದಿದ್ದ ಬಂಧಿತ ಖಲಿಸ್ತಾನಿ ಉಗ್ರ ಮಹಾಕುಂಭ ಮೇಳದಲ್ಲಿ ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಬಂಧಿತ ಉಗ್ರ ಮಸಿಹ್ ಕುಂಭ ಮೇಳದಲ್ಲಿ ಕೃತ್ಯ ಎಸಗಲು ಸಂಚು ರೂಪಿಸಿದ್ದ. ಆದರೆ ತೀವ್ರ ಭದ್ರತಾ ತಪಾಸಣೆಯಿಂದಾಗಿ ಈತ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ವಿಫಲನಾದ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಯಾಗ್ರಾಜ್ ಜಿಲ್ಲೆಯಲ್ಲಿ ಮಹಾಕುಂಭದ ಸಮಯದಲ್ಲಿ ದಾಳಿ ನಡೆಸಿದ ನಂತರ ಪೋರ್ಚುಗಲ್ಗೆ ಪಲಾಯನ ಮಾಡುವ ಉದ್ದೇಶ ಹೊಂದಿದ್ದ. ಆದರೆ ಪೊಲೀಸರ ಜಾಗರೂಕತೆಯಿಂದಾಗಿ ಆತನ ಯೋಜನೆಗಳು ವಿಫವಾಗಿತ್ತು. ಮಹಾಕುಂಭದ ಸಿದ್ಧತೆಗಳ ಸಮಯದಲ್ಲಿ ಮಸಿಹ್ ಲಕ್ನೋ ಮತ್ತು ಕಾನ್ಪುರಕ್ಕೆ ಭೇಟಿ ನೀಡಿದ್ದ ಎಂದು ಅವರು ತಿಳಿಸಿದ್ದಾರೆ.
ಮಹಾಕುಂಭ ಪ್ರಾರಂಭವಾಗುವ ಮೊದಲು ಶಾಂತಿಯನ್ನು ಭಂಗಗೊಳಿಸುವ ಪ್ರಯತ್ನಗಳ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಮಾಹಿತಿಯ ಮೇರೆಗೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಮತ್ತು ಐಎಸ್ಐ ಜೊತೆ ಸಂಪರ್ಕ ಹೊಂದಿದ್ದ ಮಸಿಹ್ನನ್ನು ಇಂದು ಕೌಶಂಬಿಯಿಂದ ಬಂಧಿಸಲಾಯಿತು ಎಂದು ಅವರು ಹೇಳಿದರು.