ಬೆಂಗಳೂರು, ಮಾ.13 (DaijiworldNews/AA): ಸಾಮಾಜಿಕ ಜಾಲತಾಣಗಳ ದುರುಪಯೋಗ ನಿಲ್ಲಿಸಲು ದೇಶದಲ್ಲಿ ಮೊದಲ ಬಾರಿಗೆ ವಿಶೇಷ ಪೊಲೀಸ್ ವಿಭಾಗವನ್ನೇ ರಾಜ್ಯ ಸರ್ಕಾರ ಮಾಡಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ನವೀನ್ ಅವರು, ಸಾಮಾಜಿಕ ಜಾಲತಾಣ ನಿಗಾವಹಿಸಲು ಪೊಲೀಸ್ ಇಲಾಖೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಪೊಲೀಸ್ ಇಲಾಖೆಗೆ ಸರ್ಕಾರ ಮತ್ತಷ್ಟು ಶಕ್ತಿಯನ್ನ ಕೊಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿ ಹೆಚ್ಚು ಗಲಭೆಗಳು ಆಗುತ್ತಿವೆ. ಸಾಮಾಜಿಕ ಜಾಲತಾಣ ನಿಯಂತ್ರಣಕ್ಕಾಗಿ ಗೃಹ ಇಲಾಖೆ ವಿಶೇಷ ಬಜೆಟ್ ನೀಡಬೇಕು. ಸಾಮಾಜಿಕ ಜಾಲತಾಣ ಮಾನಿಟರ್ ಮಾಡಲು ಕ್ರಮವಹಿಸಬೇಕು. ಇದಕ್ಕಾಗಿ ವಿಶೇಷ ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ನವೀನ್ ಅವರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವರು, ಸೋಷಿಯಲ್ ಮೀಡಿಯಾ ಬಹಳ ಉಪಯೋಗ ಆಗುತ್ತಿದೆ. ಅಷ್ಟೇ ದುರುಪಯೋಗವೂ ಸಹ ಆಗುತ್ತಿದೆ. ಟೆಕ್ನಾಲಜಿ ಇಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವ ಸ್ಥಿತಿಗೆ ನಾವು ತಲುಪಿದ್ದೇವೆ. ಫೇಸ್ಬುಕ್, ಎಕ್ಸ್, ಯೂಟ್ಯೂಬ್ಗಳನ್ನು ದುರುಪಯೋಗ ಮಾಡಿಕೊಂಡು ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಆಗುತ್ತಿದೆ. ಇದನ್ನ ನಿಯಂತ್ರಣ ಮಾಡಲು ದೇಶದಲ್ಲೇ ಮೊದಲ ಬಾರಿಗೆ ಒಂದು ವಿಭಾಗ ಪ್ರಾರಂಭ ಮಾಡಿದ್ದೇವೆ. ಎಡಿಜಿಪಿ ಸೈಬರ್ ಕ್ರೈಮ್ ವಿಭಾಗ ನೇಮಕ ಮಾಡಲಾಗಿದೆ. ಪ್ರತಿ ಠಾಣೆಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮಾಡಿದ್ದೇವೆ. 247 ಪೊಲೀಸರು ಮಾನಿಟರ್ ಮಾಡುತ್ತಾರೆ. ಇಂತಹ ಕೇಸ್ ಕಂಡುಬಂದ ಕೂಡಲೇ ಸುಮೋಟೋ ಕೇಸ್ ಹಾಕುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಫ್ಯಾಕ್ಟ್ ಚೆಕ್ ಮಾಡುವ ಆ್ಯಪ್ ಮಾಡಿದ್ದೇವೆ. ನಿತ್ಯ ಮಾನಿಟರ್ ಮಾಡುವ ಕೆಲಸ ಮಾಡುತ್ತಿದ್ದೇವೆ. ಸುಳ್ಳು ಸುದ್ದಿ ಬಂದರೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಪೊಲೀಸ್ ಠಾಣೆಯಲ್ಲಿ ಡೆಸ್ಕ್ ಮಾಡಿಕೊಂಡಿದ್ದೇವೆ. ಠಾಣೆಯಲ್ಲಿ ಮೀಡಿಯಾಗಾಗಿ ಒಂದು ಡೆಸ್ಕ್, ಲಾ ಆ್ಯಂಡ್ ಆರ್ಡರ್ಗೆ ಒಂದು ಡೆಸ್ಕ್, ವೈಯಕ್ತಿಕ ಡೆಸ್ಕ್, ಸಂಘಟನೆ ಡೆಸ್ಕ್ ಅನ್ನು ಪೊಲೀಸ್ ಠಾಣೆಯಲ್ಲಿ ಮಾಡಿದ್ದೇವೆ ಎಂದರು.