ನವದೆಹಲಿ, ಮಾ.15 (DaijiworldNews/AA): ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಕ್ಷೇತ್ರಕ್ಕಿಂತ ವಿಯೆಟ್ನಾಂನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ರಾಹುಲ್ ಗಾಂಧಿಗೆ ಆ ದೇಶದ ಬಗ್ಗೆ ಯಾಕಿಷ್ಟು ಅಸಾಧಾರಣ ಪ್ರೀತಿ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿ ಎಲ್ಲಿದ್ದಾರೆ? ಅವರು ವಿಯೆಟ್ನಾಂಗೆ ಹೋಗಿದ್ದಾರೆ ಎಂಬುದನ್ನು ನಾನು ಕೇಳಿದೆ. ಹೊಸ ವರ್ಷಾಚರಣೆ ವೇಳೆಯೂ ರಾಹುಲ್ ಗಾಂಧಿ ವಿಯೆಟ್ನಾಂಗೆ ತೆರಳಿ 22 ದಿನ ತಂಗಿದ್ದರು. ಅವರು ತಮ್ಮ ಲೋಕಸಭಾ ಕ್ಷೇತ್ರದಲ್ಲಿಯೂ ಅಷ್ಟು ದಿನ ಇರುವುದಿಲ್ಲ. ವಿಯೆಟ್ನಾಂ ಬಗ್ಗೆ ಏಕಾಏಕಿ ಪ್ರೀತಿ ಬರಲು ಕಾರಣ ಏನು? ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರು. ಅವರು ಭಾರತಲ್ಲಿ ಲಭ್ಯರಿರಬೇಕು. ವಿಯೆಟ್ನಾಂ ಬಗ್ಗೆ ಅವರಿಗೆ ಇರುವ ಅಪರಿಮಿತ ಪ್ರೀತಿಯ ಬಗ್ಗೆ ರಾಹುಲ್ ಗಾಂಧಿಯೇ ಉತ್ತರಿಸಬೇಕು. ಆ ದೇಶಕ್ಕೆ ಅವರ ಪದೇ ಪದೇ ಭೇಟಿ ಕುತೂಹಲಕಾರಿ ಎಂದು ವ್ಯಂಗ್ಯವಾಡಿದರು.