ಬೆಂಗಳೂರು, ಮಾ.29(DaijiworldNews/AK): ಯತ್ನಾಳ್ ಉಚ್ಚಾಟನೆಯಲ್ಲಿ ನನ್ನ ಹಾಗೂ ಯಡಿಯೂರಪ್ಪಅವರ ಪಾತ್ರ ಇಲ್ಲ. ಅದು ನಮ್ಮ ತೀರ್ಮಾನವೂ ಅಲ್ಲ. ನಾವು ಅವರ ಉಚ್ಛಾಟನೆಗೆ ಜವಾಬ್ದಾರರೂ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರದ ವರಿಷ್ಠರು ಯತ್ನಾಳ್ ಅವರಿಗೆ ಹಲವು ಬಾರಿ ನೋಟಿಸ್ ಕೊಟ್ಟು ತಿದ್ದುವ ಕೆಲಸ ಮಾಡಿದ್ದಾರೆ. ನಾನೂ ಕೂಡಾ ಎಲ್ಲವನ್ನು ಸರಿಪಡಿಸಿಕೊಳ್ಳೋಣ ಎಂದು ಯತ್ನಾಳ್ ಅವರಿಗೆ ಹೇಳಿದ್ದೆ. ಸದನ ನಡೆಯುವಾಗ ನಾನೂ ಕೂಡಾ ಅವರನ್ನು ವೈಯಕ್ತಿಕ ಭೇಟಿ ಮಾಡಿ ಮಾತಾಡಿದ್ದೆ, ಭೋಜನಕ್ಕೆ ಆಹ್ವಾನಿಸಿದ್ದೆ. ಯತ್ನಾಳ್ ಜೊತೆಗಿನ ಗೊಂದಲಗಳನ್ನು, ಸಮಸ್ಯೆಗಳನ್ನು ನನ್ನ ಕಡೆಯಿಂದ ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.ಹೈಕಮಾಂಡ್ನವರು ಎಲ್ಲವನ್ನೂ ತುಲನೆ ಮಾಡಿ ಕೊನೆಗೆ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಇನ್ನು ಯತ್ನಾಳ್ ಅವರ ಉಚ್ಚಾಟನೆಯನ್ನು ನಾನು ಸಂಭ್ರಮಿಸಲ್ಲ. ಹಾಗೊಂದು ವೇಳೆ ನನಗೆ ಸಂಭ್ರಮಿಸುವ ಮನಸ್ಥಿತಿ ಇದೆ ಅಂತಾದರೆ ನಾನು ರಾಜ್ಯಾಧ್ಯಕ್ಷ ಆಗಲು ನಾಲಾಯಕ್ ಎಂದು ಸ್ಪಷ್ಟಪಡಿಸಿದರು.ನಾನು ರಾಜ್ಯದ ಸಿಎಂ ಆಗಲು ಹೊರಟಿಲ್ಲ. ನಾನು ಪಕ್ಷ ಮತ್ತೆ ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ವರಿಷ್ಠರು ಕೊಟ್ಟಿರುವ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ ಎಂದರು.