ನವದೆಹಲಿ,ಮೇ. 12 (DaijiworldNews/AK) : ಆಪರೇಷನ್ ಸಿಂಧೂರದ ಮೂಲಕ ದೇಶದ ಸಾಮರ್ಥ್ಯ ವಿಶ್ವಕ್ಕೆ ಗೊತ್ತಾಗಿದೆ. ಈ ಕಾರ್ಯಾಚರಣೆಯ ಯಶಸ್ಸಿಗೆ ಕಾರಣರಾದ ನಮ್ಮ ಸೈನಿಕರಿಗೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘೀಸಿದರು.

ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯಶಸ್ವಿಯಾದ ಬೆನ್ನಲ್ಲೇ ಮೋದಿ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಆಪರೇಷನ್ ಸಿಂಧೂರ ಕೇವಲ ಹೆಸರಲ್ಲ. ಇದು ದೇಶದ ಲಕ್ಷಾಂತರ ಜನರ ಭಾವನೆಗಳ ಪ್ರತಿಬಿಂಬವಾಗಿದೆ ಎಂದರು.
ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಿದವು. ಭಾರತ ಇಷ್ಟೊಂದು ದೊಡ್ಡ ಹೆಜ್ಜೆಗಳನ್ನು ಇಡುತ್ತದೆ ಎಂದು ಭಯೋತ್ಪಾದಕರು ಕನಸು ಕಂಡಿರಲಿಲ್ಲ .ಭಾರತೀಯ ಕ್ಷಿಪಣಿಗಳು ಮತ್ತು ಡ್ರೋನ್ಗಳು ಪಾಕಿಸ್ತಾನದಲ್ಲಿರುವ ಆ ತಾಣಗಳ ಮೇಲೆ ದಾಳಿ ಮಾಡಿದಾಗ, ಅದು ಭಯೋತ್ಪಾದಕರ ಕಟ್ಟಡಗಳ ಮೇಲೆ ಮಾತ್ರವಲ್ಲ, ಅವರ ಧೈರ್ಯವನ್ನು ಪುಡಿಪುಡಿ ಮಾಡಲಾಯಿತು ಎಂದು ಹೇಳಿದರು.
ಭಯೋತ್ಪಾದಕರನ್ನು ನಾಶಮಾಡಲು ನಾವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇವೆ. ಭಯೋತ್ಪಾಕರನ್ನು ಅವರ ಮಣ್ಣಲ್ಲಿ ಹೂತು ಹಾಕುತ್ತೇವೆ. ಆಪರೇಷನ್ ಸಿಂಧೂರ್ ಮೂಲಕ ವಿಶ್ವ ಪಾಕಿಸ್ತಾನದ ಸತ್ಯವನ್ನು ನೋಡಿದೆ. ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನೆ ಮುಖ್ಯಸ್ಥರು ಭಾಗಿಯಾಗಿದ್ದಾರೆ. ಇದು ಪಾಕ್ ಪ್ರಾಯೋಜಿತ ಭಯೋತ್ಪಾದಕತೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಎಂದು ಗುಡುಗಿದರು.
ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಇರಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ಇರಲು ಸಾಧ್ಯವಿಲ್ಲ. ನೀರು ಮತ್ತು ರಕ್ತ ಒಟ್ಟಿಗೆ ಇರಲು ಸಾಧ್ಯವಿಲ್ಲ. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಾದರೆ ಅದು ಭಯೋತ್ಪಾದನೆಯ ವಿಚಾರವಾಗಿ ಇರುತ್ತದೆ ಎಂದರು.
ಕಳೆದ ಕೆಲವು ದಿನಗಳಲ್ಲಿ, ನಾವು ದೇಶದ ತಾಳ್ಮೆಯನ್ನು ನೋಡಿದ್ದೇವೆ ಮತ್ತು ನಾನು ಮೊದಲು ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸಲು ಬಯಸುತ್ತೇನೆ" ಎಂದು ಅವರು ಹೇಳಿದರು. ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸುತ್ತಾ, "ಪಹಲ್ಗಾಮ್ ದಾಳಿಯು ಭಯೋತ್ಪಾದನೆಯ ಅತ್ಯಂತ ಅನಾಗರಿಕ ಮುಖವಾಗಿತ್ತು. ಇದು ನನಗೆ ತುಂಬಾ ನೋವಿನಿಂದ ಕೂಡಿತ್ತು. ಘೋರ ದಾಳಿಯ ನಂತರ, ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನಾವು ಭಾರತೀಯ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಅಧಿಕಾರವನ್ನು ನೀಡಿದ್ದೇವೆ. ಇಂದು, ಪ್ರತಿಯೊಂದು ಭಯೋತ್ಪಾದಕ ಮತ್ತು ಭಯೋತ್ಪಾದಕ ಸಂಘಟನೆಯು ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರ ಘನತೆ ಮತ್ತು ಹೆಮ್ಮೆಗೆ ಹಾನಿ ಮಾಡಲು ಪ್ರಯತ್ನಿಸುವುದರ ಪರಿಣಾಮಗಳನ್ನು ಅರ್ಥಮಾಡಿಕೊಂಡಿದೆ ಎಂದು ಅವರು ಹೇಳಿದರು.
"ನಮ್ಮ ಧೈರ್ಯಶಾಲಿ ಸೈನಿಕರು ಆಪರೇಷನ್ ಸಿಂಧೂರ್ನ ಉದ್ದೇಶಗಳನ್ನು ಸಾಧಿಸುವಲ್ಲಿ ಅಪ್ರತಿಮ ಶೌರ್ಯವನ್ನು ತೋರಿಸಿದ್ದಾರೆ. ನಾನು ಆಪರೇಷನ್ ಸಿಂಧೂರ್ ಅನ್ನು ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳಿಗೆ ಅರ್ಪಿಸುತ್ತೇನೆ ಎಂದರು.