ಗದಗ, ಮೇ. 22 (DaijiworldNews/AK): ಕಾಂಗ್ರೆಸ್ನ ಒಂದು ಗುಂಪು ಪರಮೇಶ್ವರ್ ಮೇಲೆ ಕ್ರಮ ಆಗಬೇಕು ಅಂತ ಇಡಿಗೆ ಎಲ್ಲಾ ಮಾಹಿತಿ ನೀಡಿದೆ. ಯಾರು ಕಳುಹಿಸಿದ್ದು ಅಂತಾ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಫೋಟಕ ಹೇಳಿಕೆ ನೀಡಿದರು.

ಗೃಹಸಚಿವ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಯ ಮೇಲೆ ಇಡಿ ದಾಳಿ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, 2013ರಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು? ಇದೇ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರನ್ನು ಸೋಲಿಸಿದ್ದು, ಇದು ಜಗತ್ ಜಾಹಿರ. ಸಿದ್ದರಾಮಯ್ಯನವರೇ, ಜನರು ಇತಿಹಾಸವನ್ನು ಅಷ್ಟು ಬೇಗ ಮರೆಯೋದಿಲ್ಲ ಟಾಂಗ್ ಕೊಟ್ಟರು.
ಗೋಲ್ಡ್ ಸ್ಮಗ್ಲಿಂಗ್ನಿಂದ ಹಿಡಿದು ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಇಡಿಗೆ ಪತ್ರ ಬರೆಯುತ್ತಿದ್ದವರು ಯಾರು? ಕಾಂಗ್ರೆಸ್ನ ಒಂದು ಗುಂಪು ಪರಮೇಶ್ವರ್ ಮೇಲೆ ಕ್ರಮ ಆಗಬೇಕು ಎಂದು ಇಡಿಗೆ ಎಲ್ಲಾ ಮಾಹಿತಿ ಕಳುಹಿಸುತ್ತಾರೆ. ಇಷ್ಟೆಲ್ಲಾ ಮಾಡಿ ಈಗ ಡ್ರಾಮ ಮಾಡ್ತಿದ್ದೀರಾ ಎಂದು ಕಿಡಿಕಾರಿದರು.
ಪರಮೇಶ್ವರ್ ಬಗ್ಗೆ ನಮಗೆ ಗೌರವ ಇದೆ. ಅವರು ಒಬ್ಬ ಸಭ್ಯ ರಾಜಕಾರಣಿ. ಕಾಂಗ್ರೆಸ್ನ ಒಂದು ಗುಂಪಿನವರು ಮಾಹಿತಿಗಳನ್ನೆಲ್ಲಾ ಇಡಿಗೆ ಕಳುಹಿಸಿದ್ದು. ಯಾರು ಕಳುಹಿಸಿದ್ದು ಅಂತ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಗುಪ್ತಚರ ಇಲಾಖೆ ಅವರ ಬಳಿ ಇದೆ. ಅವರ ಬಳಿ ಕೇಳಿದ್ರೆ ಯಾರು ಅಂತ ಹೇಳುತ್ತಾರೆ. ಇಂತಹ ಮಾಹಿತಿ ಸಿಕ್ಕಾಗ ಇಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ ಎಂದರು.