ಬೆಂಗಳೂರು, ಮೇ. 22 (DaijiworldNews/ AK): ಗೃಹ ಸಚಿವ ಡಾ.ಜಿ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲಿನ ಇಡಿ ದಾಳಿ ಈಗ ಸಂಪೂರ್ಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ತುಮಕೂರಿನಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಮುಂದುವರಿದಿದೆ. ಇತ್ತ ಗೃಹ ಸಚಿವ ಪರಮೇಶ್ವರ್ ಪರ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ಇಂದು ಇಡಿ ದಾಳಿ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ್, ಇಡಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ಕೊಡೋದಾಗಿ ಹೇಳಿದರು. ತಮ್ಮ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೂ ಯಾವುದೇ ಅಕೌಂಟ್ಸ್ ಕೇಳಿದ್ರೂ ಕೊಡಿ ಅಂತ ಹೇಳಿದ್ದೇನೆ. ನಾನು ಏನೂ ಮುಚ್ಚಿಟ್ಟಿಲ್ಲ. ಇಡಿ ದಾಳಿಯ ಉದ್ದೇಶ ಗೊತ್ತಿಲ್ಲ. ಏನೇ ಇದ್ರೂ ಕಾನೂನು ನನಗೂ ಒಂದೇ ಎಲ್ಲರಿಗೂ ಒಂದೇ. ತನಿಖೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ ಎಂದು ಹೇಳಿದರು.
ಇಡಿ ತನಿಖೆಗೆ ಸಹಕಾರ ಕೊಡುವ ಮತಾಡಿದ ಪರಮೇಶ್ವರ್, ರನ್ಯಾರಾವ್ ಗೋಲ್ಡ್ ಪ್ರಕರಣದ ಲಿಂಕ್ ಬಗ್ಗೆ ಪ್ರತಿಕ್ರಿಯೆ ಕೊಡಲಿಲ್ಲ. ನಾನು ಈ ಹಂತದಲ್ಲಿ ಏನನ್ನೂ ಮಾತಾಡಲ್ಲ. ಮಾಧ್ಯಮಗಳಲ್ಲಿ ಊಹೆ ಆಧಾರಿತ ಸುದ್ದಿಗಳು ಬರುತ್ತಿದೆ. ತನಿಖೆ ಬಳಿಕ ಮಾತನಾಡುತ್ತೇನೆ ಅಂತ ಪರಮೇಶ್ವರ್ ಹೇಳಿದರು.