ಬೆಂಗಳೂರು, ಮೇ. 22 (DaijiworldNews/AK): ರಾಜ್ಯದ ಗೃಹ ಸಚಿವರಿಗೆ ಬಂಧನಕ್ಕೆ ಒಳಪಡುವ ಪರಿಸ್ಥಿತಿ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಉಪ ಮುಖ್ಯಮಂತ್ರಿಗಳೇ ಗೃಹ ಸಚಿವರು 23 ಲಕ್ಷ ಹಣ ವರ್ಗಾವಣೆ ಮಾಡಿರಬಹುದು ಎಂದು ಹೇಳಿರುವುದನ್ನು ನೋಡಿದರೆ ಗೃಹ ಸಚಿವರು ಭಾಗಿಯಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ನುಡಿದರು.
ಯಾವುದೇ ದೇಶ ವಿರೋಧಿ ಚಟುವಟಿಕೆ, ಕಳ್ಳಸಾಗಾಣಿಕೆ, ದೇಶದ ಆದಾಯಕ್ಕೆ ನಷ್ಟ ಉಂಟು ಮಾಡುವುದು ಇಂತಹ ಸಿಂಡಿಕೇಟ್ ಜೊತೆ ಸರ್ಕಾರದಲ್ಲಿರುವ ಮಂತ್ರಿಗಳು ಕೈಜೋಡಿಸಿದರೆ ಕ್ರಮ ವಹಿಸಲಾಗುತ್ತದೆ. ಈ ದಿಕ್ಕಿನಲ್ಲಿ ಇ.ಡಿ ತನಿಖೆ ನಡೆಯುತ್ತಿದ್ದು, ತನಿಖಾ ವರದಿ ಬರಲಿ. ಏಕೆಂದರೆ ಕಾಂಗ್ರೆಸ್ಸಿಗರ ಒಳ ಜಗಳಕ್ಕೆ ನಮ್ಮಿಂದ ಯಾವುದೇ ಸೊಪ್ಪು ಹಾಕುವ ಕೆಲಸ ಆಗುವುದಿಲ್ಲ. ನಮಗೆ ನ್ಯಾಯ ಸಿಗಬೇಕು; ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಪಕ್ಷದ ಮತ್ತು ಜನರ ಸ್ಪಷ್ಟ ನಿಲುವು ಎಂದು ಅವರು ತಿಳಿಸಿದರು.
ಈ ನಿಟ್ಟಿನಲ್ಲಿ ಇಡಿ ಸಂಸ್ಥೆಯಿಂದ ಗೃಹ ಸಚಿವರ ಮೇಲೆ ತನಿಖೆ ನಡೆಯುತ್ತಿದ್ದು, ತನಿಖೆ ನಡೆದು ಎಲ್ಲ ಮಾಹಿತಿಗಳು, ಸತ್ಯಾಸತ್ಯತೆ ಆಚೆ ಬಂದ ಮೇಲೆ ನಿಜಕ್ಕೂ ಸ್ಪಷ್ಟವಾಗಿ ತಿಳಿಯುತ್ತದೆ ಎಂದರು.
ತನಿಖಾ ವರದಿ ಬಂದ ನಂತರ ಗೃಹ ಸಚಿವರು ಹಣವನ್ನು ವರ್ಗಾವಣೆ ಆಗಿದೆಯೇ; ಹಣ ಬಳಕೆ ಆಗಿದೆಯೇ; ಹಣ ಕೊಟ್ಟಿದಾರೆಯೇ; ಹಣ ತೆಗೆದುಕೊಂಡಿದ್ದಾರೆಯೇ; ರನ್ಯಾ ರಾವ್ ಮತ್ತ ಗೃಹ ಸಚಿವರ ಸಂಬಂಧ ಏನು ಇವರ ವ್ಯವಹಾರ ಎಷ್ಟು ವರ್ಷದಿಂದ ನಡೆಯುತ್ತಿದೆ. ಈ ವ್ಯವಹಾರದಲ್ಲಿ ನೂರಾರು ಜನರ ಜೊತೆ ಅವರ ಸಂಬಂಧ ಇದೆಯೇ ಈ ರೀತಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರಯೇ ಎಂದು ಎಲ್ಲವೂ ಬೆಳಕಿಗೆ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.