ಕಲಬುರ್ಗಿ, ಮೇ. 24 (DaijiworldNews/AK): ಪ್ರಿಯಾಂಕ್ ಖರ್ಗೆ ರವರೇ 1948ರಲ್ಲೇ ನಿಜಾಮನ ಶಾಸನ ಹೋಗಿದೆ. ನೀವು ನಿಜಾಮರ ಉತ್ತರಾಧಿಕಾರಿಗಳಲ್ಲ, ಪ್ರಜಾಪ್ರಭುತ್ವದಲ್ಲಿ ನಿಜಾಮಗಿರಿಯನ್ನು ತೋರಿಸುವ ಪ್ರಯತ್ನ ಮಾಡಬೇಡಿ ಎಂದು ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ ಎಚ್ಚರಿಸಿದ್ದಾರೆ.

ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೂಂಡಾಗಿರಿ ನಡೆಯುವುದಕ್ಕೆ ಸಾಧ್ಯವಿಲ್ಲ; ಪ್ರಜಾಪ್ರಭುತ್ವ ಮತ್ತು ಗೂಂಡಾಗಿರಿ ಎರಡು ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕರು ರಾಜ್ಯದ ಛಾಯಾ ಮುಖ್ಯಮಂತ್ರಿಗಳು ಎಂದು ಕರೆಯುತ್ತಾರೆ. ಅವರ ಮೇಲೆ ನಿಮ್ಮ ದೌರ್ಜನ್ಯ ಮಾಡಿರುವುದು ಪ್ರಜಾಪ್ರಭುತ್ವದ ದೌರ್ಜನ್ಯಕ್ಕೆ ಸಮ ಎಂದು ಅವರು ತಿಳಿಸಿದರು.
ಸದಾಕಾಲ ಸಂವಿಧಾನದ ಬಗ್ಗೆ ಮಾತನಾಡುವ ಪ್ರಿಯಾಂಕ ಖರ್ಗೆ ರವರೇ, ಸಂವಿಧಾನವನ್ನು ಗೌರವಿಸುವ ನಡವಳಿಕೆ ಇದುವೇ ಎಂದು ಪ್ರಶ್ನಿಸಿದರು. ಘಟನೆ ನಡೆದ ನಂತರ ನೀವು ಪದ್ಮವಿಭೂಷಣ ಕೊಡಬೇಕಿತ್ತಾ; ಪದ್ಮಶ್ರೀ ನೀಡಬೇಕಿತ್ತಾ ಎಂದು ಉತ್ತರ ನೀಡುತ್ತೀರಿ. ಆ ಮೂಲಕ ಹಲ್ಲೆ ನೀವೇ ಮಾಡಿಸಿದ್ದು ಎಂದು ಸಮರ್ಥನೆ ಮಾಡುವ ಕೆಲಸವನ್ನು ಮಾಡಿದ್ದೀರಿ ಎಂದು ಆಕ್ಷೇಪಿಸಿದರು.
ಅಧಿಕಾರದಲ್ಲಿ ಇರುವವರಿಗೆ ಜಾಸ್ತಿ ಜವಾಬ್ದಾರಿ ಇರುತ್ತದೆ. ನಿಮ್ಮ ವರ್ತನೆಯು ಜವಾಬ್ದಾರಿಯುತ ವರ್ತನೆಯಾಗಲಿ. ನಿಮಗೆ ಸಹಜವಾಗಿ ಆಕ್ರೋಶವಿದ್ದರೆ, ನಿಮ್ಮ ತಂದೆಯವರು ಎಐಸಿಸಿ ಅಧ್ಯಕ್ಷರು, ಚುನಾವಣೆ ಸಂದರ್ಭದಲ್ಲಿ ಕೇರಳದ ವಯನಾಡಿನಲ್ಲಿ ನಾಮಪತ್ರ ಸಲ್ಲಿಸಲು ಹೋದಾಗ ಅವರನ್ನು ಹೊರಗಿಡುತ್ತಾರೆ. ಆವಾಗ ನೀವು ಆಕ್ರೋಶಗೊಳ್ಳಬೇಕಾಗಿತ್ತು ಎಂದು ತಿಳಿಸಿದರು.
ಎಐಸಿಸಿ ಪಕ್ಷದ ಅಧ್ಯಕ್ಷರೆಂದರೆ ಆ ಪಕ್ಷದ ಸುಪ್ರೀಂ, ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಅಸಹಾಯಕರಾಗಿ ಹೊರಗೆ ನಿಲ್ಲಿಸಿದ್ದರು ಎಂದು ನೆನಪಿಸಿದರು. ಪ್ರಿಯಾಂಕ ಖರ್ಗೆ ರವರು ಜವಾಬ್ದಾರಿಯಿಂದ ವರ್ತನೆ ಮಾಡಬೇಕು, ಗೂಂಡಾಗಿರಿಯನ್ನು ಯಾರೂ ಕೂಡ ಸಹಿಸುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ. ಅಧಿಕಾರ ದರ್ಪ ತೋರಿಸುವುದನ್ನು ಬಿಡಿ. ಅಧಿಕಾರವನ್ನ ಸದ್ಬಳಕೆ ಮಾಡಿ ಒಳ್ಳೆ ಕೆಲಸ ಮಾಡಿ ಎಂದು ಅವರು ತಿಳಿಸಿದರು.