ಬೆಂಗಳೂರು, ಮೇ. 27 (DaijiworldNews/ AK):ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರಿಗೆ ನಮ್ಮ ಜೊತೆ ಇರಲು ಇಷ್ಟವಿರಲಿಲ್ಲ. ಅವರು ರಾಜೀನಾಮೆ ಕೊಟ್ಟು ಹೋಗಬೇಕಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದಸ್ಯತ್ವಕ್ಕೆ ಚ್ಯುತಿ ಬರದ ರೀತಿಯಲ್ಲಿ ನಮ್ಮ ಮುಖಂಡರು ಅವರನ್ನು ಹೊರಕ್ಕೆ ಕಳುಹಿಸಿದ್ದಾರೆ. ನಾನು ಅವರ ಉಚ್ಚಾಟನೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಅವರ ಉಚ್ಚಾಟನೆಯು ಕೇಂದ್ರ ತೆಗೆದುಕೊಂಡ ನಿರ್ಧಾರ. ಅವರಿಬ್ಬರಿಗೂ ಖುಷಿ ಆಗಿರಬಹುದೆಂದು ನನಗೆ ಅನಿಸುತ್ತದೆ ಎಂದು ನುಡಿದರು. ಇವರಿಬ್ಬರೂ ಹಗಲು- ರಾತ್ರಿ ಬೇರೆ ಪಕ್ಷದ ಮುಖಂಡರನ್ನು ಭೇಟಿ ಮಾಡುತ್ತಿದ್ದರು. ಈಗ ಬೇರೆಯವರು ಭೇಟಿ ಮಾಡುತ್ತಿದ್ದರೆ ಅವರನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ಶಿಸ್ತಿಗೆ ಒಳಪಟ್ಟು ಕೆಲಸ ಮಾಡುವವರಿಗೆ ಅವಕಾಶ ಇದೆ ಎಂದು ಪ್ರಶ್ನೆಗೆ ಉತ್ತರಿಸಿದರು. ಕದ್ದುಮುಚ್ಚಿ ರಾಜಕಾರಣ ಮಾಡುವುದನ್ನು ನಾನು ಒಪ್ಪುವುದಿಲ್ಲ ಎಂದು ನುಡಿದರು.
ಈಗ ಭಿನ್ನರ ಸಭೆ ನಡೆಯುತ್ತಿಲ್ಲ; ಇದ್ದಿದ್ದು ಇದೆರಡೇ. ಈಗ ಭಿನ್ನ ಚಟುವಟಿಕೆಗೆ ತೆರೆ ಎಳೆಯಲಾಗಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.