ಬೆಂಗಳೂರು, ಮೇ. 30 (DaijiworldNews/AA): ಕನ್ನಡ ಖ್ಯಾತ ಕವಿ, ಸಾಹಿತಿ, ನಾಟಕ ರಚನೆಕಾರರು ಹಾಗೂ ಹೆಚ್ಎಸ್ವಿ ಎಂದೇ ಚಿರಪರಿಚಿತರಾಗಿರುವ ಹೆಚ್.ಎಸ್ ವೆಂಕಟೇಶಮೂರ್ತಿ(80) ಶುಕ್ರವಾರ ವಿಧಿವಶರಾಗಿದ್ದು, ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಗ್ರಾಮದ ಮಧ್ಯಮವರ್ಗದ ಕುಟುಂಬವೊಂದರಲ್ಲಿ 1944ರ ಜೂನ್ 23ರಂದು ಜನಿಸಿದರು. ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದರು. ಬಳಿಕ 'ಕನ್ನಡದಲ್ಲಿ ಕಥನ ಕವನಗಳು' ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು.
1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕರಾದ ಅವರು 2000ರಲ್ಲಿ ನಿವೃತ್ತಿ ಹೊಂದಿದರು. ಆ ಬಳಿಕವೂ ಬೆಂಗಳೂರನಲ್ಲೇ ನೆಲಿಸಿದ್ದರು.
ಕನ್ನಡದಲ್ಲಿ 100ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರು, ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಜೊತೆಗೆ ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನು ಬರೆದಿರುತ್ತಾರೆ. ಅವರು ಅನುವಾದಿಸಿದ ಕಾಳಿದಾಸನ ಋತುಸಂಹಾರ ಕಾವ್ಯಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ ಲಭಿಸಿದೆ.