ಬೆಂಗಳೂರು, ಜೂ. 01 (DaijiworldNews/AK): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲಕ ಯುವತಿ ಮೇಲೆ ಬಸ್ ಹತ್ತಿಸಲು ಯತ್ನಿಸಿರುವ ಘಟನೆ ಕಸ್ತೂರ್ಬಾ ರಸ್ತೆಯ ಕ್ಷೀನ್ಸ್ ಜಂಕ್ಷನ್ (ಎಂ.ಜಿ.ರಸ್ತೆ) ಬಳಿ ನಡೆದಿದೆ.

ಮೇ 23ರ ಸಂಜೆ 5.40ಕ್ಕೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಿಎಂಟಿಸಿ ಬಸ್ ಚಾಲಕ ಮತ್ತು ಯುವತಿ ನಡುವೆ ಗಲಾಟೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೀನ್ಸ್ ಜಂಕ್ಷನ್ನಲ್ಲಿ ಕಾರಿನಿಂದ ಇಳಿದ ಯುವತಿ ಬಿಎಂಟಿಸಿ ಬಸ್ ಚಾಲಕನನ್ನು ಪ್ರಶ್ನೆ ಮಾಡುತ್ತಿದ್ದರು. ಚಾಲಕ ಯುವತಿಯ ಮೇಲೆ ಬಸ್ ನುಗ್ಗಿಸಿದ್ದಾರೆ.
ಯುವತಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ಸ್ವಲ್ಪ ಯಾಮಾರಿದ್ದರು ಯುವತಿಯ ಜೀವಕ್ಕೆ ಕುತ್ತು ಬರುತ್ತಿತ್ತು. ಚಾಲಕನ ಕೃತ್ಯ ಕಂಡು ಜನರು ಬೆಚ್ಚಿಬಿದ್ದಿದ್ದರು. ಇನ್ನು, ಯುವತಿಯ ಮೇಲೆ ಬಸ್ ಹತ್ತಿಸಲು ಯತ್ನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುವತಿ ಮೇಲೆ ಬಿಎಂಟಿಸಿ ಬಸ್ ಹತ್ತಿಸಲು ಮುಂದಾಗಿದ್ದ ಚಾಲಕ ಪ್ರಶಾಂತ್ ಅವರನ್ನು ಅಮಾನತುಗೊಳಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಮೇರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.