ನವದೆಹಲಿ, ಜೂ. 01 (DaijiworldNews/AA): ಪಶ್ಚಿಮ ಬಂಗಾಳವನ್ನು ಉತ್ತರ ಕೊರಿಯವನ್ನಾಗಿ ಮಾಡಬೇಡಿ ಎಂದು ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ ಶರ್ಮಿಷ್ಠ ಪನೋಲಿ ಬಂಧನವನ್ನು ನಟಿ, ಸಂಸದೆ ಕಂಗನಾ ರನೌತ್ ಖಂಡಿಸಿದ್ದಾರೆ.

ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ಕಾನೂನಿನ ಹೆಸರಿನಲ್ಲಿ ಒಬ್ಬರಿಗೆ ಕಿರುಕುಳ ಕೊಡುವುದನ್ನು ಒಪ್ಪಲಾಗದು. ಕ್ಷಮೆ ಕೇಳಿ ಸಾಮಾಜಿಕ ಮಾಧ್ಯಮದಿಂದ ಪೋಸ್ಟ್ ಅಳಿಸಿ ಹಾಕಿದ ಮೇಲೂ ಆಕೆಯನ್ನು ಬಂಧಿಸಿ, ಹಿಂಸಿಸಿ, ಆಕೆಯ ಭವಿಷ್ಯವನ್ನು ಅಂತ್ಯಗೊಳಿಸಲು ಪ್ರಯತ್ನಿಸುತ್ತಿರುವುದು ಸರಿಯಲ್ಲ' ಎಂದು ತಿಳಿಸಿದ್ದಾರೆ.
'ಯಾವ ಹೆಣ್ಣಿಗೂ ಈ ಪರಿಸ್ಥಿತಿ ಬರಬಾರದು. ಪಶ್ಚಿಮ ಬಂಗಳಾವನ್ನು ಉತ್ತರ ಕೊರಿಯವನ್ನಾಗಿ ಮಾಡಬೇಡಿ ಎಂದು ನಾನು ಅಲ್ಲಿನ ಸರ್ಕಾರವನ್ನು ಒತ್ತಾಯಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ತಮ್ಮ ತಪ್ಪಿಗಾಗಿ ಅವರು ಕ್ಷಮೆ ಕೇಳಿದ್ದಾರೆ' ಎಂದಿದ್ದಾರೆ.
'ಯಾವುದೇ ಉದ್ದೇಶವಿಲ್ಲದೇ ಆಕೆ ಆ ಪದಗಳನ್ನು ಬಳಸಿದ್ದು, ಇಂದಿನ ಪೀಳಿಗೆ ಅಂತಹ ಭಾಷೆಯನ್ನು ಸಾಮಾನ್ಯವಾಗಿ ಬಳಸುತ್ತವೆ. ತೀರಾ ಸಣ್ಣ ವಯಸ್ಸಿನ ಯುವತಿಯಾಗಿದ್ದರಿಂದ ಆಕೆಯನ್ನು ತಕ್ಷಣ ಬಿಡುಗಡೆ ಮಾಡಬೇಕು' ಎಂದು ಹೇಳಿದ್ದಾರೆ.