ಕೇರಳ, ಜೂ. 01 (DaijiworldNews/AK): ದೇಶದ ಹಲವು ರಾಜ್ಯಗಳಲ್ಲಿ ಅವಧಿಗೂ ಮುನ್ನವೇ ಮುಂಗಾರು ಆರಂಭವಾಗಿದ್ದು, ದಕ್ಷಿಣದ ಕೇರಳದಿಂದ ಈಶಾನ್ಯ ರಾಜ್ಯಗಳವರೆಗೂ ಮಳೆ ಅಬ್ಬರ ಜೋರಾಗಿದೆ.

ಈಶಾನ್ಯ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲ್ಲೋಲ ಕಲ್ಲೋಲವಾಗಿದ್ದು, ಅವಧಿಪೂರ್ವ ಮುಂಗಾರು ಹೊಡೆತಕ್ಕೆ ಅಸ್ಸಾಂ, ಸಿಕ್ಕಿಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಮಳೆಯ ಅರ್ಭಟ ಹೆಚ್ಚಾಗಿದೆ.
ಕಳೆದೆರೆಡು ದಿನಗಳಲ್ಲಿ ಮಳೆಯಾರ್ಭಟಕ್ಕೆ ಭೂಕುಸಿತ, ಹಠಾತ್ ಪ್ರವಾಹ ಉಂಟಾಗಿ ಜಲಪ್ರವಾಹವೇ ಸಂಭವಿಸಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಅಸ್ಸಾಂನಲ್ಲಿ 9, ಅರುಣಾಚಲ ಪ್ರದೇಶದಲ್ಲಿ 9, ಮೇಘಾಲಯದಲ್ಲಿ 7 ಮತ್ತು ಮಿಜೋರಾಂನಲ್ಲಿ 6 ಸಾವನ್ನಪ್ಪಿದ್ದು, ನಾಗಾಲ್ಯಾಂಡ್ನಲ್ಲಿ ಒಬ್ಬರು ಸಾವನ್ನಪ್ಪಿದ್ದರೆ.
ಅಸ್ಸಾಂನ 12 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 78,000ಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಎನ್ಡಿಆರ್ಎಫ್ನಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಮಳೆರಾಯ ಅಬ್ಬರದಿಂದ , ಗುಡ್ಡಕುಸಿತದಿಂದ ಕೆಸರಿನಲ್ಲಿಯೇ ಮೃತದೇಹಗಳು ಹುದುಗಿವೆ. ಸಿಕ್ಕಿಂನಲ್ಲಿ ಮಳೆ, ಪ್ರವಾಹದಿಂದ ರಸ್ತೆ ಸಂಪರ್ಕ ಬಂದ್ ಆಗಿದ್ದು, 1,500 ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಕುರಿತು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ. ಇನ್ನೂ ಕೇರಳಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಕಾಸರಗೋಡಿನಲ್ಲಿ ಮಳೆ ಹೆಚ್ಚಾಗುತ್ತಿದೆ.