ಚೆನ್ನೈ, ಜು. 04 (DaijiworldNews/AK): 2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ಶುರುವಾಗಿದ್ದು, ನಟ-ರಾಜಕಾರಣಿ ದಳಪತಿ ವಿಜಯ್ ಅವರನ್ನ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧಿಕೃತ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರವಾಗಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ಡಿಎಂಕೆ ಜೊತೆಗೂ ಮೈತ್ರಿ ಇಲ್ಲ ಎಂದು ಹೇಳಲಾಗಿದೆ.
ಈಗಿನಿಂದಲೇ ಚುನಾವಣಾ ತಯಾರಿ ಮಾಡಿಕೊಳ್ಳುತ್ತಿರುವ ಟಿವಿಕೆ ಪಕ್ಷ ಮುಂದಿನ ತಿಂಗಳಲ್ಲಿ ಬೃಹತ್ ರಾಜ್ಯ ಸಮ್ಮೇಳನ ಆಯೋಜಿಸಲು ತಯಾರಿ ನಡೆಸುತ್ತಿದೆ. ಪಕ್ಷದ ಸಿದ್ಧಾಂತಗಳನ್ನ ಜನರಿಗೆ, ಮನೆ ಮನೆಗೆ ಹಳ್ಳಿಗೆ ಹಳ್ಳಿಗೆ ತಲುಪಿಸಲು ಸಾರ್ವಜನಿಕ ಸಭೆಗಳನ್ನು ನಡೆಸಲು ಯೋಜನೆ ಮಾಡಿದೆ. ಜೊತೆಗೆ ಪಕ್ಷದ ಸದಸ್ಯತ್ವ ಹೆಚ್ಚಿಸಲು ಮತ್ತು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ.
ಇನ್ನೂ ಸಭೆಯಲ್ಲಿ ಮಾತನಾಡಿದ ನಟ ಮತ್ತು ಟಿವಿಕೆ ನಾಯಕ ವಿಜಯ್, ಬಿಜೆಪಿಯ ಜೊತೆಗೆ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ. ಬಹಿರಂಗವಾಗಿ ಮಾತ್ರವಲ್ಲ, ತೆರೆಮರೆಯಲ್ಲೂ ಮೈತ್ರಿ ಮಾಡಿಕೊಳ್ಳೋದೆ ಇಲ್ಲ ಎಂದು ಹೇಳಿದ್ದಾರೆ.