ಬೆಂಗಳೂರು, ಆ. 16 (DaijiworldNews/AA): ಧರ್ಮಸ್ಥಳ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, "ರಾಜ್ಯ ಸರ್ಕಾರ ಆರ್ಸಿಬಿ ಕಪ್ ಗೆದ್ದಾಗ ಮುಂದಾಲೋಚನೆ ಇಲ್ಲದೆ ಕಾರ್ಯಕ್ರಮ ಮಾಡಿದ ತಪ್ಪಿಗೆ 11 ಜನರ ಸಾವಾಯ್ತು. ಇಂತಹ ತಪ್ಪು ಮಾಡಿದ ಸರ್ಕಾರ ಈಗ ಇನ್ನೊಂದು ಎಡವಟ್ಟು ಮಾಡಿಕೊಂಡಿದೆ. ಧರ್ಮಸ್ಥಳ ಧರ್ಮದ ದೇವಸ್ಥಾನ, ಪವಿತ್ರ ಸ್ಥಳವಾಗಿದೆ. ಸಾಮಾನ್ಯ ಜನರೂ ಭಕ್ತಿಯಿಂದ ಬೇಡಿಕೊಳ್ತಾರೆ. ಈ ಕೇಸ್ನಲ್ಲಿ ಧಾರ್ಮಿಕ ಸ್ಥಳದ ವಿಚಾರ ತಪ್ಪು, ಅಪಮಾನ ಮಾಡೋ ರೀತಿ ಅಪಪ್ರಚಾರ ಮಾಡಿದ್ರು. ಮೊದಲು ಈ ಗುಂಪು ಶಬರಿಮಲೆಯಲ್ಲಿ ಕೆಲಸ ಮಾಡಿತು. ಆಗ ಏನು ಪ್ರಯೋಜನ ಆಗಲಿಲ್ಲ. ಶಬರಿಮಲೆಗೆ ಇನ್ನಷ್ಟು ಭಕ್ತರು ಜಾಸ್ತಿ ಆದರು. ಈಗ ಅದೇ ಗುಂಪು ಧರ್ಮಸ್ಥಳಕ್ಕೆ ಬಂದಿದೆ" ಎಂದು ತಿಳಿಸಿದರು.
"ಧರ್ಮಸ್ಥಳ ಕೇಸ್ನಲ್ಲಿ ಕೆಲವರು ಕಮ್ಯೂನಿಸ್ಟ್ ಇದ್ದಾರೆ. ಕಾಂಗ್ರೆಸ್ ಇವತ್ತು ಕಮ್ಯೂನಿಸ್ಟ್ ಕಾಂಗ್ರೆಸ್ ಆಗಿದೆ. ಸಿಎಂ ಸುತ್ತಲೂ ಕಮ್ಯೂನಿಸ್ಟ್ ತುಂಬಿದ್ದಾರೆ. ಕಾಂಗ್ರೆಸ್ ಕಮ್ಯೂನಿಸ್ಟರ ಮೂಲಕ ಅವರ ಐಡಿಯಾಲಜಿ ಮಾಡಿಸ್ತಾ ಇದ್ದಾರೆ. ಅನಾಮಿಕ ವ್ಯಕ್ತಿ ಅಂತ 13 ಸ್ಥಳ ಗುರುತು ಮಾಡಿದ್ರು ಏನು ಸಿಗಲಿಲ್ಲ. ಕಾನೂನು ಪ್ರಕಾರ ಇಂತಹ ಕೇಸ್ನಲ್ಲಿ ಅನಾಮಿಕ ಹೇಳಿಕೆ ಕೊಟ್ಟರೆ ಮೊದಲು ಅರೆಸ್ಟ್ ಮಾಡಿ ಎಫ್ಐಆರ್ ಹಾಕಿ ಜೈಲಿಗೆ ಹಾಕಬೇಕು. ಅಮೇಲೆ ತನಿಖೆ ಮಾಡಬೇಕಿತ್ತು. ಆದರೆ ಈ ಸರ್ಕಾರ ಅನಾಮಿಕನನ್ನ ಚಾಂಪಿಯನ್ ಮಾಡಿದ್ದಾರೆ. ಎಸ್ಐಟಿಗೆ ಆ ಅನಾಮಿಕನೇ ಮುಖ್ಯಸ್ಥ. ಎಸ್ಐಟಿ ಅವರು ಅನಾಮಿಕನ ಕೈ ಕೆಳಗೆ ಕೆಲಸ ಮಾಡ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಧರ್ಮಸ್ಥಳ ಕೇಸ್ನಲ್ಲಿ ಈಗ ಕಾಂಗ್ರೆಸ್ಗೆ ಏನು ಸಿಕ್ಕಿಲ್ಲ. ಈಗ ಅವರು ಸಿಕ್ಕಿ ಹಾಕಿಕೊಂಡಿದ್ದಾರೆ. ಅದಕ್ಕಾಗಿ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ನಿರೀಕ್ಷಣಾ ಜಾಮೀನು ಹಾಕಿದ್ದಾರೆ. ದಿನೇಶ್ ಗುಂಡೂರಾವ್ ಕೂಡಾ ಕಮ್ಯೂನಿಸ್ಟರ ಒತ್ತಡಕ್ಕೆ ತನಿಖೆ ಮಾಡಿಸಿದ್ವಿ ಅಂತ ಈಗ ಹೇಳ್ತಿದ್ದಾರೆ. ಧರ್ಮಸ್ಥಳದಲ್ಲಿ ಏನು ಸಿಗದಿದ್ದಕ್ಕೆ ಈ ಸರ್ಕಾರ ಯೂಟರ್ನ್ ಹೊಡೆದಿದೆ. ಈ ಸರ್ಕಾರ ರಾಜ್ಯದ ಜನರ ಕ್ಷಮೆ ಕೇಳಿ ಸಿಎಂ ಕೂಡಲೇ ರಾಜೀನಾಮೆ ನೀಡಬೇಕು" ಎಂದು ಹೇಳಿದರು.