ಬೆಂಗಳೂರು, ಅ. 11 (DaijiworldNews/AK): ಇಂದು ನಗರದ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಆರೋಗ್ಯ ವಿಚಾರಿಸಿದರು.

ಜೊತೆಗೆ ದೇಶದ ಮತ್ತು ರೈತರ ಹಿತಕ್ಕಾಗಿ ಸದಾ ಶ್ರಮಿಸಿದ ಈ ಮಹಾನ್ ನಾಯಕರು ಶೀಘ್ರ ಚೇತರಿಸಿಕೊಂಡು ಉತ್ತಮ ಆರೋಗ್ಯದಲ್ಲಿ ಇರಲಿ ಎಂದು ಹಾರೈಸಿದರು. ಇತ್ತೀಚೆಗೆ ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಆರೋಗ್ಯ ಸ್ಥಿರವಾಗಿರುವುದಾಗಿ ಎಂದು ಜೆಡಿಎಸ್ ಪಕ್ಷ ಒಂದು ದಿನದ ಹಿಂದೆ ತಿಳಿಸಿದೆ.
ತಾವುಗಳು ಆತಂಕಪಡುವ ಆಗತ್ಯವಿಲ್ಲ. ಮಾಜಿ ಪ್ರಧಾನಮಂತ್ರಿಗಳು ಹಾಗೂ ಜನತಾದಳ ಪಕ್ಷದ ರಾಷ್ಟ್ರೀಯ ಅಧ್ಯಕರಾದ ದೇವೇಗೌಡರು ಚೇತರಿಸಿಕೊಂಡು ಗುಣಮುಖರಾಗಿದ್ದು, ಆರೋಗ್ಯವಾಗಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ನಾಡಿನ ಜನರ ಹಾರೈಕೆ, ಪ್ರೀತಿ, ಪ್ರಾರ್ಥನೆಯೇ ಅವರಿಗೆ ಶ್ರೀರಕ್ಷೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪಕ್ಷ ಪ್ರಕಟಣೆಯಲ್ಲಿ ಮನವಿ ಮಾಡಿದೆ.