ಬೆಂಗಳೂರು, ಅ. 13 (DaijiworldNews/AA): ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಯಾವಾಗಲೂ ಅಪ್ರಸ್ತುತ ಹೇಳಿಕೆ ಕೊಟ್ಟು ಸುದ್ದಿಯಲ್ಲಿರುವ ಮಂತ್ರಿ. ಸರ್ಕಾರಕ್ಕೆ ನೈತಿಕತೆಯನ್ನೋದು ಇದ್ದರೆ ಪ್ರಿಯಾಂಕ್ ಖರ್ಗೆ ಮೇಲೆ ಕೇಸ್ ದಾಖಲಿಸಲಿ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.

ಆರ್ಎಸ್ಎಸ್ ಚಟುವಟಿಕೆ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರವಾಗಿ ಬಿಜೆಪಿ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, "ಇಂತಹ ಘನಂದಾರಿ ಕೆಲಸ ಮಾಡಿರುವ ಪ್ರಿಯಾಂಕ್ ಖರ್ಗೆಯವರನ್ನು ಪತ್ರ ನೀಡಿದ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ವಜಾ ಮಾಡಬೇಕಿತ್ತು" ಎಂದರು.
"ಪ್ರಿಯಾಂಕ್ ಖರ್ಗೆ ಅವರಿಗೆ ಯಾವಾಗಲೂ ಪ್ರಚಾರದಲ್ಲಿರುವ ಗೀಳು. ಅವರು ಏನು ಮಾತಾಡುತ್ತಿದ್ದಾರೆ ಅನ್ನೋದೇ ಅವರಿಗೆ ಗೊತ್ತಿಲ್ಲ. ದುರುದ್ದೇಶದಿಂದ ಸಿಎಂಗೆ ಈ ಪತ್ರವನ್ನು ಬರೆದಿದ್ದಾರೆ. ಈ ವ್ಯಕ್ತಿ ಯಾವಾಗಲೂ ಅಪ್ರಸ್ತುತ ಮಾತು ಹಾಗೂ ಕೆಲಸ ಮಾಡುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಪ್ರಿಯಾಂಕ್ ಖರ್ಗೆ ಅವರಿಗೆ ಮಲ್ಲಿಕಾರ್ಜುನ ಖರ್ಗೆಯವರ ಮಗ ಎನ್ನುವುದಷ್ಟೇ ಅರ್ಹತೆ. ಜ್ಞಾನ ಇಲ್ಲದಿದ್ದರೂ ಕುಳಿತಲ್ಲೇ ಅಧಿಕಾರ ಮಾಡುತ್ತಾರೆ. ಬರೀ ವಂಶಪಾರಂಪರ್ಯವಾಗಿ ಬಂದಿರುವವರಿಗೆ ಯಾವ ಅರ್ಹತೆ ಇದೆ. ನಿಮ್ಮ ಸಾಧನೆ ಹಾಗೂ ಕೆಲಸ ಮಾತಾಡಬೇಕು. ಪ್ರಿಯಾಂಕ್ ಖರ್ಗೆ ಅವರೇ ಸಮಾಜ ಒಡೆಯುವ ಕೆಲಸ ಮಾಡಬೇಡಿ. ಬದಲಾಗಿ ಬಾಂಧವ್ಯ ಮತ್ತು ಗೌರವವನ್ನು ಹೆಚ್ಚಿಸಿ" ಎಂದು ತಿಳಿಸಿದರು.
"ನಿಮ್ಮ ಕೀಳು ಆಲೋಚನೆಗಳಿಗೆ ಜನ ನಗುತ್ತಾರೆ. ನೀವು ಬರೆದಿರುವ ಪತ್ರ ಹಿಂಪಡೆದು ಕ್ಷಮೆಯಾಚಿಸಿ, ತಪ್ಪಿಗೆ ಪಶ್ಚಾತ್ತಾಪ ಪಡಲು ಅವಕಾಶ ಸಿಗುತ್ತದೆ. ಇಂತಹ ಘನಂದಾರಿ ಕೆಲಸ ಮಾಡಿರುವ ಪ್ರಿಯಾಂಕ್ ಖರ್ಗೆಯವರನ್ನು ಪತ್ರ ನೀಡಿದ ಕೂಡಲೇ ಸಿಎಂ ವಜಾ ಮಾಡಬೇಕಿತ್ತು. ಸಿದ್ದರಾಮಯ್ಯನವರೇ ಶತಮಾನೋತ್ಸವ ಆಚರಿಸಿಕೊಂಡಿರುವ ಆರ್ಎಸ್ಎಸ್ ಅನ್ನು ಕೆಟ್ಟದಾಗಿ ನಡೆಸಿಕೊಳ್ಳಲು ನಿಮಗೆ ಆತ್ಮಸಾಕ್ಷಿ ಇದ್ಯಾ?" ಎಂದು ಪ್ರಶ್ನಿಸಿದರು.