ಬೆಂಗಳೂರು, ,ಅ. 30(DaijiworldNews/AK):ಧರ್ಮಸ್ಥಳ ಕೇಸ್ ವಿಚಾರವಾಗಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಮತ್ತು ವಿಠಲ್ ಗೌಡಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.

ಧರ್ಮಸ್ಥಳದ ಠಾಣೆಯ FIR 39/2025 ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ಪೀಠ, ಪರ-ವಿರೋಧ ವಾದ ಆಲಿಸಿ ಪ್ರಕರಣದ ತನಿಖೆಗೆ ನ.12ರವರೆಗೆ ತಡೆ ನೀಡಿ ಆದೇಶಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಬಾಲನ್, ಈಗಾಲೇ 9 ಬಾರಿ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ. ಎಫ್ಐಆರ್ನಲ್ಲಿ ನಮ್ಮನ್ನು ಆರೋಪಿಗಳೆಂದು ಉಲ್ಲೇಖಿಸಿಲ್ಲ. ಖುದ್ದಾಗಿ ನೋಟಿಸ್ ಜಾರಿ ಮಾಡದೇ ವಾಟ್ಸ್ಯಾಪ್, ಇಮೇಲ್ಗಳಲ್ಲಿ ನೀಡಿದ್ದಾರೆ.
BNSS ಸೆಕ್ಷನ್ 35(3) ಅಡಿಯಲ್ಲಿ ಸಮನ್ಸ್ ನೀಡಿದ್ದು, ಎಸ್ಐಟಿ ಸಮನ್ಸ್ ನೀಡಿರುವುದು ಕಾನೂನು ಬಾಹಿರ. ನಾವು ಆರೋಪಿಗಳೂ ಅಲ್ಲ, ಸಾಕ್ಷಿಯೂ ಅಲ್ಲವೆಂದು ವಾದ ಮಂಡಿಸಿದ್ದರು. ರಾಜಕೀಯ , ಧಾರ್ಮಿಕ ಮತ್ತು ಸಂಘಟನಾತ್ಮಕ ವೈರತ್ವದಿಂದ ನೋಟಿಸ್ ನೀಡಲಾಗಿದೆ. ವಿಚಾರಣೆ ಹೆಸರಲ್ಲಿ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಕೂರಿಸಲಾಗುತ್ತೆ. ಈಗಾಗಲೇ 150 ಗಂಟೆಗೂ ಹೆಚ್ಚು ಕಾಲ ಅರ್ಜಿದಾರರ ವಿಚಾರಣೆ ನಡೆಸಲಾಗಿದೆ. ಆರಂಭದಲ್ಲಿ 211(a) ಅಡಿ ಎಫ್ಐಆರ್ ದಾಖಲಿಸಿ ನಂತರ ಬೇರೆ ಸೆಕ್ಷನ್ ಸೇರಿಸಿದ್ದಾರೆ ಎಂದು ಬಾಲನ್ ವಾದಿಸಿದ್ದಾರಜಿ
ಎಸ್ಐಟಿ ಪರ ಎಸ್ಪಿಪಿ ಬಿ.ಎನ್. ಜಗದೀಶ್ ವಾದ ಮಂಡಿಸಿದ್ದು, ಅರ್ಜಿದಾರರ ಪ್ರಚೋದನೆ ಮೇಲೆಯೇ ಚಿನ್ನಯ್ಯ ದೂರು ನೀಡಿದ್ದಾನೆ. ನಂತರ 164 ಹೇಳಿಕೆ ನೀಡಿ ಅರ್ಜಿದಾರರ ಮೇಲೆ ಆರೋಪ ಮಾಡಿದ್ದಾನೆ. ಧರ್ಮಸ್ಥಳ ಗ್ರಾಮದ 20 ಕಡೆ ಅಗೆದು ಪರಿಶೀಲನೆ ನಡೆಸಲಾಗಿದ್ದು, ಈಗ ಆರೋಪಿಗಳನ್ನಾಗಿಸಿ ಇವರಿಗೆ ನೋಟಿಸ್ ನೀಡಲಾಗಿದೆ ಎಂದು ನ್ಯಾಯಾಲಕ್ಕೆ ತಿಳಿಸಿದ್ದಾರೆ.