ಗದಗ, ಅ. 31 (DaijiworldNews/AA): ಸ್ಥಳೀಯರು ಕಳ್ಳನೆಂದು ಭಾವಿಸಿದ ಹಿನ್ನೆಲೆ ವ್ಯಕ್ತಿಯೋರ್ವ ತೆಂಗಿನ ಮರ ಏರಿ ಸುಮಾರು ನಾಲ್ಕು ಗಂಟೆಗಳ ಕಾಲ ಅಲ್ಲೇ ಕುಳಿತ ವಿಚಿತ್ರ ಘಟನೆ ಅಕ್ಟೋಬರ್ 27ರಂದು ಗದಗದಲ್ಲಿ ನಡೆದಿದೆ.

ಮರ ಏರಿ ಕುಳಿತ ವ್ಯಕ್ತಿಯನ್ನು ಬೆಳಗಾವಿಯ ಬಸವರಾಜ ಸೊಲ್ಲಾಪುರ ಎಂದು ಗುರುತಿಸಲಾಗಿದೆ. ಅವರು ಗದಗದ ವಿವೇಕಾನಂದ ನಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಸ್ನೇಹಿತನ ಮನೆ ಎಂದು ಭಾವಿಸಿ ತಪ್ಪಾಗಿ ಮತ್ತೊಂದು ಮನೆಯ ಬಾಗಿಲು ತಟ್ಟಿದ್ದಾರೆ. ಆದರೆ ಅದು ತನ್ನ ಸ್ನೇಹಿತನ ಮನೆ ಅಲ್ಲ ಎಂದು ಅರಿತ ನಂತರ ಅಲ್ಲಿಂದ ಹೊರಟಿದ್ದಾರೆ. ಇದರಿಂದ ಸಂಶಯಗೊಂಡ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದಾಗ, ಬಸವರಾಜ್ ಸಿಕ್ಕಿಬೀಳುವ ಭಯದಿಂದ ಹತ್ತಿರವಿದ್ದ ತೆಂಗಿನ ಮರ ಏರಿ ಕುಳಿತಿದ್ದಾರೆ. ಪೊಲೀಸರು ಮತ್ತು ನಿವಾಸಿಗಳು ಹಲವಾರು ಗಂಟೆಗಳ ಕಾಲ ಆ ಪ್ರದೇಶದಲ್ಲಿ ಆತನಿಗಾಗಿ ಹುಡುಕಾಡಿದರೂ ಸಿಗಲಿಲ್ಲ. ನಂತರ ಯಾರೋ ಮರದ ಮೇಲೆ ಕುಳಿತಿರುವುದನ್ನು ನೋಡಿದ್ದಾರೆ. ಪೊಲೀಸರು ಮತ್ತು ಸ್ಥಳೀಯರು ಪದೇ ಪದೇ ಮನವಿ ಮಾಡಿದರೂ, ಬಸವರಾಜ್ ಕೆಳಗೆ ಬರಲು ನಿರಾಕರಿಸಿದ್ದಾರೆ.
ಆಗ 50 ರಿಂದ 60 ಜನರ ಗುಂಪು ಸ್ಥಳದಲ್ಲಿ ಜಮಾಯಿಸಿ, ಅವನನ್ನು ಕಳ್ಳನೆಂದು ಭಾವಿಸಿದರು. ಅಗ್ನಿಶಾಮಕ ದಳದವರು ಏಣಿಯೊಂದಿಗೆ ಬಂದು ಅವರಿಗೆ ಯಾವುದೇ ರೀತಿ ತೊಂದರೆ ನೀಡುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟ ನಂತರ ಆತನನ್ನು ಸುರಕ್ಷಿತವಾಗಿ ಮರದಿಂದ ಕೆಳಗಿಳಿಸಲಾಯಿತು.