ಜಮ್ಮು, ನ. 28 (DaijiworldNews/AA): ಜಮ್ಮು ಮತ್ತು ಕಾಶ್ಮೀರ ಪತ್ರಕರ್ತ ಅರ್ಫಾಜ್ ಅಹ್ಮದ್ ಡೇಯಿಂಗ್ ಅವರ ಮನೆಯನ್ನು ಅಧಿಕಾರಿಗಳು ಗುರುವಾರ ನೆಲಸಮ ಮಾಡಿದ್ದು, ಜಮ್ಮುವಿನ ನಿವಾಸಿ ಕುಲದೀಪ್ ಶರ್ಮಾ ಅವರು ಐದು ಮಾರ್ಲಾ ನಿವೇಶನವನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಆಡಳಿತವು ಡೇಯಿಂಗ್ ಅವರ ಮನೆಯನ್ನು ಸರ್ಕಾರಿ ಭೂಮಿ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅದನ್ನು ನೆಲಸಮ ಮಾಡಿತ್ತು. ಆದರೆ, ನಾನು ಮಾಡಿದ ವರದಿಗೆ ಪ್ರತೀಕಾರವಾಗಿ ತನ್ನ ಮನೆಯನ್ನು ನೆಲಸಮ ಮಾಡಲಾಗಿದೆ ಎಂದು ಡೇಯಿಂಗ್ ಹೇಳಿದ್ದಾರೆ.
ಡೇಯಿಂಗ್ ಅವರು ನೀಸ್ ಸೆಹರ್ ಇಂಡಿಯಾ ಎಂಬ ಡಿಜಿಟಲ್ ಸುದ್ದಿ ಪೋರ್ಟಲ್ ನಡೆಸುತ್ತಿದ್ದಾರೆ. ಇತ್ತೀಚೆಗೆ ಪ್ರಮುಖ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಶಂಕಿತ ಡ್ರಗ್ಸ್ ಕಳ್ಳಸಾಗಣೆದಾರರೊಂದಿಗೆ ಪೊಲೀಸ್ ಅಧಿಕಾರಿಯ ನಂಟು ಹೊಂದಿದ್ದಾರೆ ಎಂದು ವರದಿ ಮಾಡಿದ್ದರು. ಹೀಗಾಗಿ ತಮ್ಮ ಮನೆ ಧ್ವಂಸ ಮಾಡಲಾಗಿದೆ ಎಂದಿದ್ದಾರೆ ಡೇಯಿಂಗ್.
ಮನೆ ಧ್ವಂಸದಿಂದ ಡೇಯಿಂಗ್ ಅವರ ವೃದ್ಧ ಪೋಷಕರು, ಅವರ ಪತ್ನಿ ಮತ್ತು ಅವರ ಮೂವರು ಮಕ್ಕಳು ನಿರಾಶ್ರಿತರಾಗಿದ್ದಾರೆ. ಇನ್ನು ಪತ್ರಕರ್ತನ ಕುಟುಂಬ ಹೆಚ್ಚಿನ ಸಮಯ ನೀಡುವಂತೆ ಅಧಿಕಾರಿಗಳಲ್ಲಿ ಬೇಡಿಕೊಂಡರೂ ಕೊಡದಿದ್ದಾಗ, ನೆರೆಹೊರೆಯವರು ಆತನ ಕುಟುಂಬಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ.
"ನಾನು ಅರ್ಫಾಜ್ಗೆ 5 ಮರ್ಲಾ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದೇನೆ. ಅದಕ್ಕೆ ಸರಿಯಾದ ಕಂದಾಯ ದಾಖಲೆಗಳನ್ನು ನೀಡಿದ್ದೇನೆ. ಅದನ್ನು ನೋಂದಾಯಿಸಿದ್ದೇನೆ. ಇದು ನನ್ನ ಭೂಮಿ ಮತ್ತು ನನ್ನ ಸಹೋದರ ಪತ್ರಕರ್ತ ಅಸಹಾಯಕನಾಗಿ ಉಳಿಯಬಾರದು ಎಂದು ಅದನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ" ಎಂದು ಕುಲದೀಪ್ ಶರ್ಮಾ ತಿಳಿಸಿದ್ದಾರೆ.