ನವದೆಹಲಿ, ಡಿ. 11 (DaijiworldNews/AA): ಜೆಎನ್ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ಮಾಜಿ ವಿದ್ಯಾರ್ಥಿ ಮತ್ತು ದೆಹಲಿ ಗಲಭೆಯ ಆರೋಪಿ ಉಮರ್ ಖಾಲಿದ್ಗೆ 14 ದಿನಗಳ ಮಧ್ಯಂತರ ಜಾಮೀನು ನೀಡಿ ದೆಹಲಿ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.

ಡಿಸೆಂಬರ್ 27ರಂದು ಖಾಲಿದ್ ನ ಸಹೋದರಿಯ ಮದುವೆ ನಡೆಯಲಿದ್ದು ಡಿಸೆಂಬರ್ 14 ರಿಂದ ಡಿಸೆಂಬರ್ 29 ರವರೆಗೆ ಜಾಮೀನು ಕೋರಿ ಕರ್ಕಾರ್ಡೂಮಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್ಜೆ) ಸಮೀರ್ ಬಾಜ್ಪೈ ಡಿಸೆಂಬರ್ 16ರಿಂದ ಡಿಸೆಂಬರ್ 29 ರವರೆಗೆ ಖಾಲಿದ್ಗೆ ಜಾಮೀನು ನೀಡಿದೆ.
ಜಾಮೀನು ಅವಧಿಯಲ್ಲಿ ಅರ್ಜಿದಾರರಿಗೆ ಸಾಮಾಜಿಕ ಮಾಧ್ಯಮ ಬಳಸಲು ಅವಕಾಶವಿಲ್ಲ. ಕುಟುಂಬ, ಸಂಬಂಧಿಕರು ಮತ್ತು ಸ್ನೇಹಿತರನ್ನು ಮಾತ್ರ ಭೇಟಿಯಾಗಬೇಕು. ಈ ಅವಧಿಯಲ್ಲಿ ಅವರು ತಮ್ಮ ಮನೆಯಲ್ಲಿ ಅಥವಾ ಅವರು ನಿರ್ದಿಷ್ಟಪಡಿಸಿದಂತೆ ವಿವಾಹ ಸಮಾರಂಭಗಳು ನಡೆಯುವ ಸ್ಥಳದಲ್ಲಿ ಮಾತ್ರ ಇರಬೇಕೆಂದು ಎಂದು ಕೋರ್ಟ್ ಷರತ್ತು ವಿಧಿಸಿದೆ.
ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು, ಕೆಲವು ಷರತ್ತುಗಳಿಗೆ ಒಳಪಟ್ಟು, 20,000 ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಇಬ್ಬರು ಶ್ಯೂರಿಟಿಗಳನ್ನು ಒದಗಿಸಬೇಕು. ಉಮರ್ ಖಾಲಿದ್ ಅವರನ್ನು ಮಧ್ಯಂತರ ಜಾಮೀನು ಅವಧಿ ಮುಗಿದ ನಂತರ ಡಿಸೆಂಬರ್ 29 ರ ಸಂಜೆ ಸಂಬಂಧಿತ ಜೈಲಿನ ಜೈಲು ಅಧೀಕ್ಷಕರ ಮುಂದೆ ಶರಣಾಗುವಂತೆ ನಿರ್ದೇಶಿಸಿದೆ ಎಂದು ಹೇಳಿದೆ.