ಬೆಳಗಾವಿ, ಡಿ. 12 (DaijiworldNews/AA): "ಸಂಕ್ರಾಂತಿಯಲ್ಲ, ಅಧಿವೇಶನ ಮುಗಿದ ತಕ್ಷಣ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುತ್ತಾರೆ" ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್ ಸಿಡಿಸಿದ್ದಾರೆ.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನನ್ನ ಹಣೆಯಲ್ಲಿ ಬರೆದಿದ್ದಕ್ಕೆ ನಾನು ಶಾಸಕ ಆಗಿಲ್ಲವೇ, ಹಾಗೇ ಡಿ.ಕೆ .ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದೆ ಅವರು ಸಿಎಂ ಆಗುತ್ತಾರೆ. ಗುರುವಾರ ನಾವು 55 ಜನ ಶಾಸಕರು ಊಟಕ್ಕೆ ಸೇರಿದ್ದೆವು. ಊಟ ಮಾಡಿದ್ದೇವೆ ಅಷ್ಟೇ. ನಮಗೆ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು, ಆಗುತ್ತಾರೆ" ಎಂದು ಹೇಳಿದರು.
"ಡಿ.ಕೆ .ಶಿವಕುಮಾರ್ ಕಷ್ಟಪಟ್ಟಿದಕ್ಕೆ ಫಲ ಸಿಗುತ್ತದೆ. ಅಧಿವೇಶನ ಮುಗಿದ ಬಳಿಕ ಆದಷ್ಟು ಬೇಗ ಆ ಫಲ ಸಿಗುತ್ತದೆ. ನಂಬರ್ ಮುಖ್ಯ ಅಲ್ಲ, ಹೈಕಮಾಂಡ್ನ ನಿರ್ದೇಶನ ಮುಖ್ಯ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ. ಹೈಕಮಾಂಡ್ ಹೇಳಿದರೆ ಯಾರು ಯಾಕೆ ಕೇಳಲ್ಲ? ಸಂಖ್ಯಾಬಲ ಮುಖ್ಯವಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
"50-60 ಜನರು ಔತಣಕೂಟಕ್ಕೆ ಸೇರಿದ್ದರು. ಆದರೆ, ರಾಜಕೀಯ ಚರ್ಚೆ ಆಗಿಲ್ಲ. ಡಿ.ಕೆ.ಶಿವಕುಮಾರ್ ಕರೆದರೆ ಎಲ್ಲ 224 ಜನ ಶಾಸಕರೂ ಕರೆದರೆ ಊಟಕ್ಕೆ ಬರುತ್ತಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂದಲ್ಲ. ವಿಶ್ವಾಸ, ಪ್ರೀತಿ ಒಂದು ಬಾಂಧವ್ಯ. ಎಲ್ಲರೂ ಡಿ.ಕೆ. ಶಿವಕುಮಾರ್ ಅವರಿಗೆ ಆತ್ಮೀಯರೇ, ಎಲ್ಲರೂ ಸ್ನೇಹಿತರೇ. ಅವರವರ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ" ಎಂದು ತಿಳಿಸಿದರು.