ಬೆಂಗಳೂರು, ಡಿ. 14 (DaijiworldNews/TA): ಪ್ರಯಾಣಿಕರ ಸುರಕ್ಷತೆ ಹೆಚ್ಚಿಸುವುದು ಹಾಗೂ ಮಾರ್ಗಮಧ್ಯೆ ಉಂಟಾಗುವ ಬಸ್ ಸೇವಾ ವ್ಯತ್ಯಯಗಳನ್ನು ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಕರ್ನಾಟಕ ರಸ್ತೆ ಸಾರಿಗೆ ನಿಗಮ ‘ಕೆಎಸ್ಆರ್ಟಿಸಿ ಅಪಘಾತ ತುರ್ತು ಸ್ಪಂದನಾ ವಾಹನ’ ಎಂಬ ನೂತನ ವಿಶೇಷ ಸೇವೆಯನ್ನು ಆರಂಭಿಸಿದೆ.

ಶಾಂತಿನಗರದಲ್ಲಿರುವ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ತುರ್ತು ಸ್ಪಂದನಾ ಸೇವೆಗೆ ಅಧಿಕೃತ ಚಾಲನೆ ನೀಡಿದರು. ಈ ತುರ್ತು ವಾಹನಗಳು ಮಾರ್ಗಮಧ್ಯೆ ಅಪಘಾತಕ್ಕೀಡಾದ ಅಥವಾ ತಾಂತ್ರಿಕ ದೋಷದಿಂದ ನಿಂತಿರುವ ಕೆಎಸ್ಆರ್ಟಿಸಿ ಬಸ್ಗಳ ದುರಸ್ತಿ ಕಾರ್ಯಕ್ಕೆ ತಕ್ಷಣ ಸ್ಪಂದಿಸಲಿದೆ. ಮೊದಲ ಹಂತದಲ್ಲಿ ಬೆಂಗಳೂರು ಹಾಗೂ ಮೈಸೂರು ಕೇಂದ್ರಗಳಲ್ಲಿ ಎರಡು ತುರ್ತು ಸ್ಪಂದನಾ ವಾಹನಗಳನ್ನು ನಿಯೋಜಿಸಲಾಗಿದೆ.
ಬೆಂಗಳೂರು ಸುತ್ತಮುತ್ತಲಿನ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳ ಮಾರ್ಗಗಳಲ್ಲಿ ಸಂಭವಿಸುವ ಅವಘಡಗಳಿಗೆ ಶೀಘ್ರವಾಗಿ ಸ್ಪಂದಿಸಲು ಈ ವಾಹನಗಳು ಸದಾ ಸಿದ್ಧವಾಗಿರಲಿವೆ. ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣಗಳಿಂದ ರಾಜ್ಯದೊಳಗಿನ ಹಾಗೂ ಅಂತಾರಾಜ್ಯ ಮಾರ್ಗಗಳಲ್ಲಿ ಸಂಚರಿಸುವ ಬಸ್ಗಳು ಕೆಲವೊಮ್ಮೆ ತಾಂತ್ರಿಕ ದೋಷದಿಂದ ರಸ್ತೆಯಲ್ಲೇ ನಿಂತು ಸಂಚಾರ ಅಡಚಣೆ ಉಂಟುಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಅಗತ್ಯ ಬಿಡಿಭಾಗಗಳು, ಉಪಕರಣಗಳು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ತಕ್ಷಣ ಸ್ಥಳಕ್ಕೆ ಕರೆದೊಯ್ಯಲು ಈ ತುರ್ತು ವಾಹನಗಳು ನೆರವಾಗಲಿವೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಅಪಘಾತ ಸಂಭವಿಸಿದ ವೇಳೆ ಚಾಲಕ ಮತ್ತು ನಿರ್ವಾಹಕರಿಗೆ ತಕ್ಷಣ ನೆರವು ನೀಡುವುದು, ಗಾಯಗೊಂಡ ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗೆ ಸಾಗಿಸುವುದಕ್ಕೂ ಈ ವಾಹನಗಳು ಉಪಯುಕ್ತವಾಗಲಿವೆ. ಪ್ರತಿಯೊಂದು ತುರ್ತು ಸ್ಪಂದನಾ ವಾಹನಕ್ಕೆ 7.22 ಲಕ್ಷ ರೂ ವೆಚ್ಚವಾಗಿದ್ದು, 2026ರ ಜನವರಿ ಅಂತ್ಯದೊಳಗೆ ಇನ್ನೂ 10 ಹೊಸ ವಾಹನಗಳನ್ನು ಸೇವೆಗೆ ಸೇರಿಸಲಾಗುವುದು ಎಂದು ಸಚಿವರು ಘೋಷಿಸಿದರು. ಮುಂದಿನ ಹಂತದಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಹಂತ ಹಂತವಾಗಿ ಈ ತುರ್ತು ಸ್ಪಂದನಾ ವಾಹನಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.