ನವದೆಹಲಿ, ಡಿ. 15 (DaijiworldNews/AA): ಚಾಕೊಲೇಟ್ ನೀಡುವ ಆಮಿಷವೊಡ್ಡಿ ಎರಡು ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ ಬಳಿಕ ಆಕೆಯನ್ನು ಕೊಲೆ ಮಾಡಿ ಜೈಲು ಶಿಕ್ಷೆಗೊಳಗಾದ ಅಪರಾಧಿಯ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರಸ್ಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2022ರ ಜುಲೈ 25 ರಂದು ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರಸ್ಕರಿಸಿದ ಮೂರನೇ ಕ್ಷಮದಾನ ಅರ್ಜಿ ಇದಾಗಿದೆ. ಮಹಾರಾಷ್ಟ್ರದ ಜಲ್ನಾ ನಗರದ ಇಂದಿರಾನಗರ ಪ್ರದೇಶದಲ್ಲಿ 2012ರ ಮಾರ್ಚ್ 6 ರಂದು ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ, ಕೊಲೆ ಮಾಡಲಾಗಿತ್ತು. 2015ರ ಸೆಪ್ಟೆಂಬರ್ 16 ರಂದು ವಿಚಾರಣಾ ನ್ಯಾಯಾಲಯ ಆರೋಪಿ ರವಿ ಅಶೋಕ್ ಘುಮಾರನನ್ನು ಅಪರಾಧಿ ಎಂದು ಘೋಷಿಸಿ ಮರಣ ದಂಡನೆ ವಿಧಿಸಿತ್ತು.
ಅಪರಾಧಿ ರವಿ ಅಶೋಕ್ ಘುಮಾರಿಗೆ ವಿಧಿಸಿದ್ದ ಮರಣದಂಡನೆಯನ್ನು 2016ರ ಜನವರಿಯಲ್ಲಿ ಬಾಂಬೆ ಹೈಕೋರ್ಟ್ ಈ ಆದೇಶವನ್ನು ಎತ್ತಿಹಿಡಿದಿತ್ತು. ಬಳಿಕ 2019ರ ಅಕ್ಟೋಬರ್ 3 ರಂದು ಈ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.
ಎರಡು ವರ್ಷದ ಮಗುವಿನ ಮೇಲೆ ಹೀನಕೃತ್ಯ ಆರೋಪಿಯ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ಅಲ್ಲದೇ ಕ್ರೌರ್ಯದ ಭಯಾನಕ ಕಥೆ ಪ್ರದರ್ಶಿಸುತ್ತದೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ (ಭಾರತದ ಈಗಿನ ಸಿಜೆಐ) ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತಿಳಿಸಿತ್ತು.