ಕಲಬುರಗಿ, ಡಿ. 22 (DaijiworldNews/AA): 'ನಾಯಕತ್ವದ ಗೊಂದಲಗಳನ್ನು ಹೈಕಮಾಂಡ್ ಸೃಷ್ಟಿಸಿಲ್ಲ. ಅವೆಲ್ಲ ಸ್ಥಳೀಯವಾಗಿ ಸೃಷ್ಟಿಯಾಗುತ್ತಿದೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿರುವ ಬೆನ್ನಲ್ಲೆ, "ಹೈಕಮಾಂಡ್ ಅನ್ನು ದೂಷಿಸುವ ಬದಲು ಸ್ಥಳೀಯ ನಾಯಕರೇ ಆಂತರಿಕ ಗೊಂದಲವನ್ನು ಪರಿಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್ನತ್ತ ಬೊಟ್ಟು ಮಾಡಿದರೆ ಹೇಗೆ?" ಎಂದು ಖರ್ಗೆ ಪ್ರಶ್ನಿಸಿದ್ದಾರೆ.
"ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಒಳಗೊಂಡು ಎಲ್ಲರೂ ಸೇರಿ ಕಟ್ಟಿದ ಪಕ್ಷ. ಪಕ್ಷ ಸಂಘಟನೆ ಕೆಲಸ ನನ್ನಿಂದ ಆಗಿದೆ, ತನ್ನಿಂದ ಆಗಿದೆ ಎಂದು ಯಾರೂ ಹೇಳಬಾರದು. ಕಾರ್ಯಕರ್ತರೂ ಪಕ್ಷ ಕಟ್ಟಿದ್ದು ಅವರು, ಇವರು ಎಂದು ಹೇಳುವುದನ್ನು ಬಿಡಬೇಕು" ಎಂದು ನಾಯಕತ್ವದ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಹೇಳಿಕೆ ನೀಡಿದ್ದಾರೆ.