ಜಬಲ್ಪುರ, ಡಿ. 23(DaijiworldNews/TA): ಮಧ್ಯಪ್ರದೇಶದ ಜಬಲ್ಪುರದಲ್ಲಿ ಅಂಧ ಮಹಿಳೆಯ ಮೇಲೆ ಬಿಜೆಪಿ ನಾಯಕಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಅಂಧ ಮಹಿಳೆಯನ್ನು ಅವಮಾನಿಸಿ ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವೈರಲ್ ವಿಡಿಯೋದಲ್ಲಿ ಬಿಜೆಪಿ ನಾಯಕಿ ದೃಷ್ಟಿಹೀನತೆಯನ್ನು ಉದ್ದೇಶಿಸಿ ಅವಹೇಳನಕಾರಿ ಮಾತುಗಳನ್ನು ಆಡುತ್ತಿರುವುದು ಕಾಣಿಸುತ್ತದೆ. “ಈ ಜನ್ಮದಲ್ಲಿ ಕುರುಡರಾಗಿ ಇದ್ದವರು ಮುಂದಿನ ಜನ್ಮದಲ್ಲೂ ಕುರುಡರಾಗಿಯೇ ಹುಟ್ಟುತ್ತಾರೆ” ಎಂದು ನೋವುಂಟುಮಾಡುವ ರೀತಿಯಲ್ಲಿ ಮಾತನಾಡಿರುವುದು, ಜೊತೆಗೆ ಮಹಿಳೆಯ ಮೇಲೆ ದೈಹಿಕವಾಗಿ ಹಿಂಸಿಸುತ್ತಿರುವ ದೃಶ್ಯಗಳೂ ವೀಡಿಯೋದಲ್ಲಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸುವುದನ್ನೂ ಕಾಣಬಹುದು.
ಈ ಘಟನೆ ಡಿಸೆಂಬರ್ 20ರಂದು ಜಬಲ್ಪುರದ ಗೋರಖ್ಪುರ ಪ್ರದೇಶದ ಚರ್ಚ್ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಬಿಜೆಪಿ ಜಿಲ್ಲಾ ಕಾರ್ಯಕರ್ತೆ ಅಂಜು ಭಾರ್ಗವ ಅವರು ಈ ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆಗಳ ಸದಸ್ಯರೊಂದಿಗೆ ಉಪಸ್ಥಿತರಿದ್ದರು. ಮಕ್ಕಳು ಹಾಗೂ ಅಂಗವಿಕಲ ಮಹಿಳೆಯರು ಕುಳಿತಿದ್ದ ಚರ್ಚ್ ಆವರಣಕ್ಕೆ ಅವರು ಪ್ರವೇಶಿಸಿದ ವೇಳೆ ವಾಗ್ವಾದ ಆರಂಭವಾಗಿ, ಅಂತಿಮವಾಗಿ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬರುವ ಜಗಳಕ್ಕೆ ಕಾರಣವಾಯಿತು ಎಂದು ಆರೋಪಿಸಲಾಗಿದೆ.
ಈ ವಿಡಿಯೋ ಸೋಮವಾರ ವೈರಲ್ ಆದ ಬಳಿಕ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ದೃಷ್ಟಿಹೀನ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ಮಹಿಳೆ ಬಿಜೆಪಿಯ ಜಬಲ್ಪುರ ಜಿಲ್ಲಾ ಉಪಾಧ್ಯಕ್ಷೆ ಅಂಜು ಭಾರ್ಗವ ಎಂದು ಆರೋಪಿಸಿದ್ದಾರೆ. ವೈರಲ್ ವಿಡಿಯೋ ಮತ್ತು ಘಟನೆಯ ಸುತ್ತಲಿನ ಆರೋಪಗಳ ಕುರಿತು ಬಿಜೆಪಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ ಸ್ಪಷ್ಟ ಪ್ರತಿಕ್ರಿಯೆಯನ್ನು ನೀಡಿಲ್ಲ.