ನವದೆಹಲಿ, ಡಿ. 23(DaijiworldNews/TA): ರೈತರ ಶ್ರಮಕ್ಕೆ ಗೌರವ, ದೇಶದ ಭವಿಷ್ಯಕ್ಕೆ ಬಲ. ರೈತರು ದೇಶದ ಬೆನ್ನೆಲುಬು. ಅವರು ಬೆವರು ಸುರಿಸಿ ದುಡಿದಾಗಲೇ ನಾವು ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗುತ್ತದೆ. ತಾವು ಹಸಿದಿದ್ದರೂ, ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ, ಇತರರ ಬದುಕು ಸುಗಮವಾಗಲೆಂದು ರೈತರು ಕಷ್ಟಪಟ್ಟು ದುಡಿಯುತ್ತಾರೆ. ಆಹಾರ ಭದ್ರತೆಯಷ್ಟೇ ಅಲ್ಲ, ದೇಶದ ಆರ್ಥಿಕತೆಯಲ್ಲಿಯೂ ರೈತರ ಕೊಡುಗೆ ಅಮೂಲ್ಯವಾಗಿದೆ.

ರಾಷ್ಟ್ರದ ಪ್ರಗತಿಗೆ ರೈತರ ಪಾತ್ರವನ್ನು ಗೌರವಿಸಲು, ಶ್ರಮಜೀವಿಗಳಾದ ರೈತರ ಸೇವೆಯನ್ನು ಸ್ಮರಿಸಲು ಮತ್ತು ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಮಾಜದ ಗಮನ ಸೆಳೆಯಲು ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಹಿನ್ನೆಲೆ, ಇತಿಹಾಸ ಮತ್ತು ಮಹತ್ವವನ್ನು ಇಲ್ಲಿ ತಿಳಿಯೋಣ.
ರಾಷ್ಟ್ರೀಯ ರೈತರ ದಿನದ ಇತಿಹಾಸ : ಪ್ರತಿವರ್ಷ ಡಿಸೆಂಬರ್ 23 ರಂದು ಆಚರಿಸಲಾಗುವ ರಾಷ್ಟ್ರೀಯ ರೈತರ ದಿನವು ದೇಶದ ಐದನೇ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನದ ಸ್ಮರಣಾರ್ಥವಾಗಿದೆ. ಅವರು 1979ರಿಂದ 1980ರ ವರೆಗೆ ಭಾರತದ ಪ್ರಧಾನಿಯಾಗಿದ್ದರು.
ಚೌಧರಿ ಚರಣ್ ಸಿಂಗ್ ಅವರು ರೈತರನ್ನು ದೇಶದ ಅಭಿವೃದ್ಧಿಯ ಕೇಂದ್ರಬಿಂದುವಾಗಿ ನೋಡಿದ್ದರು. ರೈತರು ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಿಷ್ಠರಾಗದೇ ದೇಶದ ಒಟ್ಟಾರೆ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ದೃಢ ನಂಬಿಕೆ ಅವರಿಗೆ ಇತ್ತು. ತಮ್ಮ ಆಡಳಿತಾವಧಿಯಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ ಹಲವು ಕೃಷಿ ಸುಧಾರಣೆಗಳು, ನೀತಿಗಳು ಮತ್ತು ಕಾನೂನುಗಳನ್ನು ಜಾರಿಗೆ ತಂದರು.
ಅವರ ಸಂಪೂರ್ಣ ರಾಜಕೀಯ ಜೀವನವು ರೈತರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಆರ್ಥಿಕತೆಯ ಉನ್ನತಿಗೆ ಮೀಸಲಾಗಿತ್ತು. ರೈತರ ಹಿತಕ್ಕಾಗಿ ಅಪಾರವಾಗಿ ಶ್ರಮಿಸಿದ ಚೌಧರಿ ಚರಣ್ ಸಿಂಗ್ ಅವರ ಗೌರವಾರ್ಥವಾಗಿ 2001ರಲ್ಲಿ ಭಾರತ ಸರ್ಕಾರ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನವಾಗಿ ಘೋಷಿಸಿತು. ಅಂದಿನಿಂದ ಈ ದಿನವನ್ನು ಪ್ರತಿವರ್ಷ ದೇಶಾದ್ಯಂತ ಆಚರಿಸಲಾಗುತ್ತಿದೆ.
ರಾಷ್ಟ್ರೀಯ ರೈತರ ದಿನದ ಮಹತ್ವ : ರಾಷ್ಟ್ರೀಯ ರೈತರ ದಿನದ ಮುಖ್ಯ ಉದ್ದೇಶ ರೈತರ ಕೊಡುಗೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವುದು ಹಾಗೂ ಕೃಷಿ ಕ್ಷೇತ್ರದ ಸಮಸ್ಯೆಗಳತ್ತ ಸರ್ಕಾರ, ಸಮಾಜ ಮತ್ತು ನೀತಿ ರೂಪಿಸುವವರ ಗಮನ ಸೆಳೆಯುವುದಾಗಿದೆ.
ಈ ದಿನವು ರೈತರು ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳು ಮತ್ತು ಹಕ್ಕುಗಳ ಕುರಿತು ಚರ್ಚೆಗೆ ವೇದಿಕೆಯಾಗುತ್ತದೆ. ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಮಾರುಕಟ್ಟೆ ಅನಿಶ್ಚಿತತೆ, ಬೆಲೆ ಸ್ಥಿರತೆ, ತಾಂತ್ರಿಕ ಬದಲಾವಣೆಗಳಂತಹ ಪ್ರಮುಖ ವಿಷಯಗಳು ಈ ಸಂದರ್ಭದಲ್ಲಿ ವಿಶೇಷವಾಗಿ ಚರ್ಚೆಗೆ ಬರುತ್ತವೆ.
ಇದಲ್ಲದೆ, ಹೊಸ ಪೀಳಿಗೆಗೆ ಕೃಷಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ರೈತರ ಕುರಿತು ಗೌರವಭಾವ ಬೆಳೆಸುವುದು ಕೂಡ ಈ ದಿನದ ಪ್ರಮುಖ ಗುರಿಯಾಗಿದೆ. ದೇಶದ ಆಹಾರ ಸ್ವಾವಲಂಬನೆ ಮತ್ತು ಜನಸಾಮಾನ್ಯರ ಬದುಕು ರೈತರ ಕಠಿಣ ಪರಿಶ್ರಮದ ಮೇಲೆಯೇ ಅವಲಂಬಿತವಾಗಿದೆ ಎಂಬುದನ್ನು ರಾಷ್ಟ್ರೀಯ ರೈತರ ದಿನವು ನಮಗೆ ಮತ್ತೊಮ್ಮೆ ನೆನಪಿಸುತ್ತದೆ.