ಬೆಂಗಳೂರು, ಡಿ. 24 (DaijiworldNews/AK):ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣೆಯನ್ನು ದಿಕ್ಸೂಚಿಯಾಗಿ ತೆಗೆದುಕೊಂಡರೆ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸ್ಪಷ್ಟ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 4 ಪಟ್ಟಣ ಪಂಚಾಯಿತಿಗಳ 76 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ 48, ಕಾಂಗ್ರೆಸ್ 23, ಎಸ್.ಡಿ.ಪಿ.ಐ. 3, ಪಕ್ಷೇತರ 2 ಜನರು ಗೆದ್ದಿದ್ದಾರೆ. ರಾಯಚೂರು, ಬೆಂಗಳೂರು ಗ್ರಾಮಾಂತರದ 2 ವಾರ್ಡಿಗೆ ಚುನಾವಣೆ ನಡೆದಿದ್ದು, ಎರಡರಲ್ಲೂ ಬಿಜೆಪಿ ಗೆದ್ದಿದೆ. ಉಪ ಚುನಾವಣೆಯನ್ನೂ ಸೇರಿಸಿದರೆ 50 ಸೀಟುಗಳನ್ನು ಬಿಜೆಪಿ ಗೆದ್ದಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪೂರ್ಣ ಪ್ರಮಾಣದ 33 ಸಚಿವರಿದ್ದಾರೆ. ಇದಾ ನಿಮ್ಮ ಸಾಧನೆ? 76ರಲ್ಲಿ 50 ಸೀಟು ನಮ್ಮದಾಗಿದೆ ಎಂದು ವಿಶ್ಲೇಷಿಸಿದರು.
ನೀವೆಷ್ಟೇ ಗ್ಯಾರಂಟಿ ಕೊಟ್ಟರೂ ಪ್ರಯೋಜನವಿಲ್ಲ. ರಾಜ್ಯದಲ್ಲಿ ಅಭಿವೃದ್ಧಿಶೂನ್ಯ ಸರಕಾರವಿದೆ. ವೇತನ ಕೊಡಲಾಗುತ್ತಿಲ್ಲ. ವಿಶ್ವವಿದ್ಯಾಲಯ, ಶಾಲೆ, ಕಾಲೇಜುಗಳಲ್ಲಿ ಉಪನ್ಯಾಸಕರೇ ಇಲ್ಲ. ರಾಜ್ಯಾದ್ಯಂತ ಗುಂಡಿ ಬಿದ್ದ ರಸ್ತೆಗಳಿವೆ ಎಂದು ಟೀಕಿಸಿದರು.