ಜಮ್ಮು, ಜ. 10 (DaijiworldNews/TA): ತಾಯಿ ಪ್ರೀತಿ, ಕಾಳಜಿ ಮತ್ತು ಆರೈಕೆಗೆ ಯಾವುದೇ ಮಿತಿಯಿಲ್ಲ ಎಂಬುದನ್ನು ಜಮ್ಮು ಮತ್ತು ಕಾಶ್ಮೀರದ ಈ ಮನಕಲುಕುವ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಉಗ್ರರ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಬಿಎಸ್ಎಫ್ ಕಾನ್ಸ್ಸ್ಟೇಬಲ್ ಗುರ್ನಾಮ್ ಸಿಂಗ್ ಅವರ ತಾಯಿ, ತೀವ್ರ ಚಳಿಯಿಂದ ಮಗನಿಗೆ ತೊಂದರೆಯಾಗಬಾರದೆಂದು ಅವರ ಪುತ್ಥಳಿಗೆ ಕಂಬಳಿ ಹಾಸಿರುವ ದೃಶ್ಯ ಕಣ್ಣೀರು ತರಿಸುವಂತಿದೆ.

ಜಮ್ಮು ಮತ್ತು ಕಾಶ್ಮೀರದ ಆರ್ಎಸ್ಪುರದಲ್ಲಿ ಸ್ಥಾಪಿಸಲಾದ ಹುತಾತ್ಮ ಗುರ್ನಾಮ್ ಸಿಂಗ್ ಅವರ ಪುತ್ಥಳಿ ಸಾರ್ವಜನಿಕ ಸ್ಥಳದಲ್ಲಿದ್ದು, ಗಾಜಿನ ಪೆಟ್ಟಿಗೆಯ ಒಳಗಿದ್ದು ಮಳೆ ಮತ್ತು ಧೂಳಿನಿಂದ ರಕ್ಷಿಸಲಾಗಿದೆ. ಆದರೆ ಇತ್ತೀಚೆಗೆ ದಾಖಲಾಗಿರುವ ತೀವ್ರ ಚಳಿಯ ನಡುವೆ, ತಾಯಿಯ ಮನದಾಳದ ನೋವಿನ ವೈರಲ್ ವೀಡಿಯೋ, ಮಗನಿಗೆ ಹೊದಿಸಿದ ಕಂಬಳಿ ಪುತ್ಥಳಿಗೆ ಪ್ರೀತಿಯ ರಕ್ಷೆಯಂತೆ ವ್ಯಕ್ತವಾಗಿದೆ.
ಹುತಾತ್ಮ ಯೋಧನ ತಾಯಿ ಜಸ್ವಂತ್ ಕೌರ್ ಮಾತನಾಡಿ, “ನಾವು ಜಾಕೆಟ್, ಕಂಬಳಿ ಹಾಕಿಕೊಂಡು ಚಳಿಯಿಂದ ತಪ್ಪಿಸಿಕೊಳ್ಳುತ್ತಿದ್ದೇವೆ. ನನ್ನ ಮಗನನ್ನು ಈ ತೀವ್ರ ಚಳಿಗೆ ಹೇಗೆ ಬಿಡಲಿ? ಹೀಗಾಗಿ ಅವನಿಗೆ ಕಂಬಳಿ ಹಾಸಿದ್ದೇನೆ” ಎಂದು ಕಣ್ಣೀರಿನಿಂದ ಹೇಳಿದ್ದಾರೆ.
ಜಸ್ವಂತ್ ಕೌರ್ ಪ್ರತಿದಿನ ಬೆಳಿಗ್ಗೆ ಮಗನ ಪುತ್ಥಳಿಯ ಬಳಿಗೆ ತೆರಳಿ ಹೂವುಗಳನ್ನು ಅರ್ಪಿಸಿ, ಪುತ್ಥಳಿಯನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸುತ್ತಾರೆ. ಕೆಲ ಹೊತ್ತು ಮಗನೊಂದಿಗೆ ಮಾತನಾಡುವಂತೆ ಪುತ್ಥಳಿಯ ಎದುರು ನಿಂತು ಮನದಾಳದ ಮಾತುಗಳನ್ನು ಹೇಳಿಕೊಳ್ಳುತ್ತಾರೆ. “ನನ್ನ ಮಗ ಇಲ್ಲಿ ನಿಂತಿದ್ದಾನೆ” ಎಂಬ ಭಾವನೆಯೊಂದಿಗೆ ಬದುಕುತ್ತಿರುವ ಈ ತಾಯಿ, ತೀವ್ರ ಚಳಿ ಹಿನ್ನೆಲೆಯಲ್ಲಿ ಇದೀಗ ಕಂಬಳಿ ಹೊದಿಸಿದ್ದಾರೆ. ತಾಯಿ ಪ್ರೀತಿಗೆ ಮಿತಿ ಇಲ್ಲ ಎಂಬುದಕ್ಕೆ ಇದು ಜೀವಂತ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಕಣ್ಣೀರಿಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಆರ್ಎಸ್ಪುರ ನಿವಾಸಿಯಾಗಿದ್ದ ಗುರ್ನಾಮ್ ಸಿಂಗ್ ಧೈರ್ಯ ಮತ್ತು ಸಾಹಸಕ್ಕೆ ಹೆಸರುವಾಸಿಯಾಗಿದ್ದರು. 2016ರಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿ ಹೋರಾಡಿದ ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಅವರ ಸಾಹಸಗಾಥೆ ಕೇಳಿದರೆ ಯಾರ ಎದೆಯಾದರೂ ಝಲ್ಲೆನೆಸುವಂತಿದೆ.
2016ರ ಅಕ್ಟೋಬರ್ 21ರಂದು ಗುರ್ನಾಮ್ ಸಿಂಗ್ ಭಾರತ–ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ರೇಖೆಯ ಹರಿ ನಗರ ಸೆಕ್ಟರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅದಕ್ಕೂ ಮುನ್ನ ಅಕ್ಟೋಬರ್ 20ರಂದು ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆ ತಕ್ಕ ಉತ್ತರ ನೀಡಿತ್ತು. ಈ ದಾಳಿಯ ಹಿಂದೆಯೇ ಉಗ್ರರನ್ನು ಒಳನುಸುಳಿಸುವ ಷಡ್ಯಂತ್ರವಿತ್ತು. ಆದರೆ ಗುರ್ನಾಮ್ ಸಿಂಗ್ ಒಬ್ಬನೇ ಒಬ್ಬ ಉಗ್ರನಿಗೂ ಒಳನುಸುಳಲು ಅವಕಾಶ ನೀಡದೆ, ಹಲವರನ್ನು ಹೊಡೆದುರುಳಿಸಿ ದೇಶವನ್ನು ರಕ್ಷಿಸಿದ್ದರು.
ಮರುದಿನ ಬೆಳಗ್ಗೆ ಪಾಕಿಸ್ತಾನ ಸೇನೆ ಮತ್ತು ಉಗ್ರರು ಸಂಯುಕ್ತವಾಗಿ ಮತ್ತೊಮ್ಮೆ ದಾಳಿ ನಡೆಸಿದರು. ಆ ವೇಳೆ ಪಾಕಿಸ್ತಾನ ಸ್ನೈಪರ್ನ ಗನ್ನಿಂದ ಹೊರಟ ಗುಂಡು ನೇರವಾಗಿ ಗುರ್ನಾಮ್ ಸಿಂಗ್ ಅವರ ತಲೆಗೆ ತಗುಲಿತು. ಗಂಭೀರವಾಗಿ ಗಾಯಗೊಂಡಿದ್ದರೂ, ಪ್ರತಿದಾಳಿಯಲ್ಲಿ ಸ್ನೈಪರ್ ಅನ್ನು ಹತ್ಯೆ ಮಾಡಿದ ಬಳಿಕ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. 48 ಗಂಟೆಗಳ ಕಾಲ ಸಾವು–ಬದುಕಿನ ನಡುವೆ ಹೋರಾಟ ನಡೆಸಿದ ಈ ವೀರ ಯೋಧ ಕೊನೆಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಇಂದು ಅವರ ಪುತ್ಥಳಿಗೆ ತಾಯಿ ಹಾಸಿರುವ ಕಂಬಳಿ, ದೇಶಕ್ಕಾಗಿ ಪ್ರಾಣತೆತ್ತ ಮಗನು ತಾಯಿಯ ಒಡಲಲ್ಲಿ ಎಂದಿಗೂ ಜೀವಂತ ಎಂಬುದನ್ನು ಜಗತ್ತಿಗೆ ತೋರಿಸುತ್ತಿದೆ.