ಗದಗ, ಜ. 22 (DaijiworldNews/AK): ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯಾ ಅಗೆಯುವ ವೇಳೆ ಸಿಕ್ಕ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದ ರಿತ್ತಿ ಕುಟುಂಬಕ್ಕೆ ಕೊನೆಗೂ ಜಿಲ್ಲಾಡಳಿತ ಸಹಾಯಹಸ್ತ ನೀಡಲು ಮುಂದಾಗಿದೆ.

ರಿತ್ತಿ ಕುಟುಂಬ 30*40 ಸೈಟ್ ನೀಡುವುದಾಗಿ ಲಕ್ಕುಂಡಿ ಗ್ರಾಮ ಪಂಚಾಯತ್ ಘೋಷಣೆ ಮಾಡಿದೆ. ಇಂದು (ಜನವರಿ 22) ಲಕ್ಕುಂಡಿ ಗ್ರಾಮ ಪಂಚಾಯತಿಯ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಇದೇ ವೇಳೆ ನಿಧಿಯನ್ನು ಹಸ್ತಾಂತರ ಮಾಡಿದ ರಿತ್ತಿ ಕುಟುಂಬದ ಸದಸ್ಯರನ್ನು ಸನ್ಮಾನ ಮಾಡಲಾಯಿತು.
ಜನವರಿ 26ರಂದು ಗಣರಾಜ್ಯೋತ್ಸವದಂದು ಜಾಗದ ಪ್ರಮಾಣ ಪತ್ರವನ್ನು ಕುಟುಂಬಕ್ಕೆ ಹಸ್ತಾಂತರವಾಗಲಿದೆ. ಇನ್ನು ನಿವೇಶನ ಜೊತೆ ಎಲ್ಲ ಶಾಲೆಗಳಲ್ಲಿ ಪ್ರಜ್ವಲ್ ರಿತ್ತಿ ಫೋಟೋ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ.
ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಅಧಿಕಾರಿಗಳು, ಸರ್ವ ಸದಸ್ಯರ ಸಮ್ಮುಖದಲ್ಲಿ ಲಕ್ಕುಂಡಿ ಮಾರುತಿ ನಗರದಲ್ಲಿ ರಿತ್ತಿ ಕುಟುಂಬಕ್ಕೆ 30*40 ಸೈಟ್ ನೀಡುವ ನಿರ್ಣಯವನ್ನು ಪಾಸ್ ಮಾಡಲಾಯಿತು. ಮಾನವೀಯ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ಗ್ರಾಮ ಪಂಚಾಯತ್ ಸೈಟ್ ನೀಡುವ ನಿರ್ಧಾರ ತೆಗೆದಕೊಂಡಿದೆ. ಮುಂದೆ ಸಚಿವರು, ಶಾಸಕರ ಅನುದಾನದಲ್ಲಿ ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಲಾಗಿದೆ. ಅಲ್ಲದೇ ಪ್ರಜ್ವಲ್ ರಿತ್ತಿಗೆ ಉಚಿತ ಶಿಕ್ಷಣ, ಪ್ರಜ್ವಲ್ ತಾಯಿ ಗಂಗಮ್ಮಗೆ ಕೆಲಸ ಕೊಡುವುದಾಗಿ ಪಂಚಾಯತ್ ಭರವಸೆ ನೀಡಿದೆ.
ಜನವರಿ 10 ರಂದು ಪ್ರಜ್ವಲ್ ರಿತ್ತಿ ಮನೆ ಪಾಯ ಅಗೆಯುವಾಗ 466 ಗ್ರಾಮ ಚಿನ್ನ ಪತ್ತೆಯಾಗಿತ್ತು. ಬಳಿಕ ಪ್ರಜ್ವಲ್ ರಿತ್ತಿ, ತಾಯಿ ಕಸ್ತೂರೆವ್ವ ರಿತ್ತಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾರೆ.