ಬೆಂಗಳೂರು, ಜ. 23 (DaijiworldNews/TA): ವಿಶೇಷ ಅಧಿವೇಶನ ವೇಳೆ ರಾಜ್ಯಪಾಲರನ್ನು ಅವಮಾನಿಸಿದ ಘಟನೆಯು ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ದಿವಾಳಿತನ ಮತ್ತು ಹತಾಶೆಯನ್ನು ಬಿಂಬಿಸುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ವಿಧಾನಮಂಡಲದ ಕಗ್ಗೊಲೆಗೆ ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದ್ದಾರೆ.

ಜಂಟಿ ಅಧಿವೇಶನ ವೇಳೆ ರಾಜ್ಯಪಾಲರನ್ನು ತಡೆದು ಅಗೌರವದಿಂದ ನಡೆದುಕೊಂಡ ಕಾಂಗ್ರೆಸ್ ವರ್ತನೆ ಬಗ್ಗೆ ಪ್ರತಿಕ್ರಿಯಿಸಿರುವ ಚೌಟ, ನಿರಂತರವಾಗಿ ಕೇಂದ್ರದ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತ ಬಂದಿರುವ ಕಾಂಗ್ರೆಸ್ ಸರಕಾರ, ಈಗ ತನ್ನ ಸುಳ್ಳಿನ ಪ್ರಚಾರಕ್ಕೆ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನೂ ಬಳಸಿಕೊಳ್ಳಲು ಮುಂದಾಗಿರುವುದು ಅತ್ಯಂತ ದುರದೃಷ್ಟಕರ ಸಂಗತಿ.
ತನ್ನ ಆಡಳಿತಾತ್ಮಕ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ರಾಜ್ಯಪಾಲರ ಮೂಲಕವೇ ಸುಳ್ಳುಗಳನ್ನು ಹೇಳಿಸಲು ಸರಕಾರ ಹಠಕ್ಕೆ ಬಿದ್ದಿತ್ತು. ಆದರೆ ಸತ್ಯಕ್ಕೆ ದೂರವಾದ ಸರಕಾರದ "ಸುಳ್ಳಿನ ಕಂತೆ'ಗಳನ್ನು ಓದಲು ರಾಜ್ಯಪಾಲರು ನಿರಾಕರಿಸಿದಾಗ, ಅವರನ್ನು ಸದನದ ಒಳಗೇ ಅವಮಾನಿಸಿರುವುದು ಸಂವಿಧಾನದ ಆಶಯಗಳಿಗೆ ಮಾಡಿದ ದೊಡ್ಡ ಅಪಚಾರ ಎಂದು ಕ್ಯಾ| ಚೌಟ ಆರೋಪಿಸಿದ್ದಾರೆ.