ತಿರುವನಂತಪುರಂ, ಜ. 23 (DaijiworldNews/TA): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳವು ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನು ಹೇಳಿದರು.

ಸ್ಥಳೀಯ ಸಂಸ್ಥೆಗಳಲ್ಲಿ ನಾಲ್ಕು ದಶಕಗಳ ಎಡಪಕ್ಷ ಆಡಳಿತಕ್ಕೆ ಅಂತ್ಯ ಹಾಡಿ ಬಿಜೆಪಿ ತಿರುವನಂತಪುರಂ ನಗರಸಭೆಯನ್ನು ಗೆದ್ದ ಕೇವಲ ಒಂದು ತಿಂಗಳ ಬಳಿಕ ಪ್ರಧಾನಿ ರಾಜ್ಯ ರಾಜಧಾನಿಗೆ ಭೇಟಿ ನೀಡಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಗುಜರಾತ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಪ್ರಯಾಣ ಒಂದೇ ನಗರದಿಂದ ಆರಂಭವಾಗಿತ್ತು ಎಂದು ಪ್ರಧಾನಿ ನೆನಪಿಸಿಕೊಂಡರು. 1987ರ ಮೊದಲು ಗುಜರಾತ್ನಲ್ಲಿ ಬಿಜೆಪಿ ಸಣ್ಣ ಪಕ್ಷವಾಗಿದ್ದು, ಮೊದಲ ಬಾರಿಗೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ನ್ನು ಗೆದ್ದ ಬಳಿಕ ಪಕ್ಷದ ಬೆಳವಣಿಗೆಗೆ ದಾರಿ ತೆರೆದಿತು. ಇತ್ತೀಚೆಗೆ ತಿರುವನಂತಪುರಂ ನಗರಸಭೆಯಲ್ಲಿ ಬಿಜೆಪಿ ಸಾಧಿಸಿದ ಗೆಲುವು ಕೂಡ ಅದೇ ರೀತಿಯ ಆರಂಭವಾಗಿದೆ ಎಂದು ಅವರು ಹೇಳಿದರು.
“ಗುಜರಾತ್ನ ಜನರು ನಮಗೆ ಸೇವೆ ಸಲ್ಲಿಸುವ ಅವಕಾಶ ನೀಡಿದರು, ನಾವು ದಶಕಗಳ ಕಾಲ ಅದನ್ನು ಮುಂದುವರೆಸಿದ್ದೇವೆ. ನಮ್ಮ ರಾಜಕೀಯ ಪ್ರಯಾಣ ಒಂದೇ ನಗರದಿಂದ ಆರಂಭವಾದಂತೆ, ಕೇರಳದಲ್ಲೂ ಅದೇ ಮಾದರಿಯಲ್ಲಿ ಶುರುವಾಗಿದೆ” ಎಂದು ಮೋದಿ ಹೇಳಿಕೆ ನೀಡಿದರು. ತಿರುವನಂತಪುರಂ ನಗರಸಭೆಯಲ್ಲಿ ಬಿಜೆಪಿ ಪಡೆದ ಜಯವು ಕೇರಳವನ್ನು ಎಲ್ಡಿಎಫ್ ಮತ್ತು ಯುಡಿಎಫ್ ಪಕ್ಷಗಳ ಭ್ರಷ್ಟ ಆಡಳಿತದಿಂದ ಮುಕ್ತಗೊಳಿಸುವ ದೃಢ ಸಂಕಲ್ಪದ ಪ್ರತೀಕವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ದಶಕಗಳ ಕಾಲ ಈ ಎರಡೂ ಪಕ್ಷಗಳು ರಾಜಧಾನಿ ನಗರವನ್ನು ನಿರ್ಲಕ್ಷಿಸಿದ್ದು, ಮೂಲಭೂತ ಸೌಲಭ್ಯಗಳು ಹಾಗೂ ಮೂಲಸೌಕರ್ಯಗಳಿಂದ ತಿರುವನಂತಪುರಂ ವಂಚಿತವಾಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ತಂಡ ಈಗಾಗಲೇ ಅಭಿವೃದ್ಧಿ ಹೊಂದಿದ ತಿರುವನಂತಪುರಂ ನಿರ್ಮಾಣದತ್ತ ಕೆಲಸ ಆರಂಭಿಸಿದೆ ಎಂದು ಹೇಳಿದ ಮೋದಿ, “ನಗರದ ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಬಹಳ ದಿನಗಳಿಂದ ಕಾಯುತ್ತಿದ್ದ ಬದಲಾವಣೆ ಈಗ ಸ್ಪಷ್ಟವಾಗಿ ಕಾಣಿಸುತ್ತಿದೆ. ತಿರುವನಂತಪುರಂ ಇಡೀ ದೇಶಕ್ಕೆ ಮಾದರಿ ನಗರವಾಗಲಿದೆ” ಎಂದರು. ತಿರುವನಂತಪುರಂ ಅನ್ನು ಭಾರತದ ಅತ್ಯುತ್ತಮ ನಗರಗಳಲ್ಲಿ ಒಂದಾಗಿ ರೂಪಿಸಲು ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಭರವಸೆ ನೀಡಿದ ಪ್ರಧಾನಿ, ಕೇರಳದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ಹೊಸ ರೈಲು ಸೇವೆಗಳಿಗೆ ಚಾಲನೆ ನೀಡುವ ಉದ್ದೇಶದಿಂದ ರಾಜ್ಯಕ್ಕೆ ಆಗಮಿಸಿದ್ದಾರೆ.