ತಿರುವನಂತಪುರಂ, ಜ. 23 (DaijiworldNews/TA): ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹೂಮಳೆಯ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ಅವರ ಭೇಟಿಯ ಹಿನ್ನೆಲೆಯಲ್ಲಿ ನಗರದಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಕೇರಳಕ್ಕೆ ನಿಗದಿಪಡಿಸಲಾದ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲು, ಹಾಗೂ ಹಲವು ಯೋಜನೆಗಳ ಉದ್ಘಾಟನೆಯ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಕೇರಳದ ರಾಜಧಾನಿ ತಿರುವನಂತಪುರಕ್ಕೆ ಆಗಮಿಸಿದ್ದರು.
ಮೋದಿ ಆಗಮನದ ವೇಳೆ ರೋಡ್ ಶೋ ಮಾರ್ಗದಾದ್ಯಂತ ಕೇರಳದ ಸಾಂಪ್ರದಾಯಿಕ ಜಾನಪದ ಕಲೆಗಳ ಪ್ರದರ್ಶನ ನಡೆಯಿತು. ಕಲಾವಿದರ ನೃತ್ಯ ಮತ್ತು ವಾದ್ಯಗಳ ಮಧ್ಯೆ ಪ್ರಧಾನಿ ಮೋದಿ ಜನತೆಯತ್ತ ಕೈ ಬೀಸುತ್ತಾ ಅಭಿವಾದನೆ ಸಲ್ಲಿಸಿದರು. ಪ್ರಧಾನಿಯನ್ನು ನೇರವಾಗಿ ವೀಕ್ಷಿಸಲು ರಸ್ತೆ ಎರಡೂ ಬದಿಗಳಲ್ಲೂ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ನಗರದಲ್ಲಿ ಜನಸ್ತೋಮ ಹರಿದು ಬಂದಿದ್ದು, ಪ್ರಧಾನಿ ಭೇಟಿಯು ವಿಶೇಷ ಆಕರ್ಷಣೆಯಾಗಿ ಪರಿಣಮಿಸಿತು.