ಬೆಳಗಾವಿ, ಜ. 25 (DaijiworldNews/TA): ದೇಶದ ಅತಿ ದೊಡ್ಡ ದರೋಡೆ ಪ್ರಕರಣವೊಂದು ಕರ್ನಾಟಕದಲ್ಲಿ ನಡೆದಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ-ಗೋವಾ ಗಡಿ ಭಾಗದ ಮೂಲಕ ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 400 ಕೋಟಿ ರೂಪಾಯಿ ನಗದು ಹಣವಿದ್ದ ಎರಡು ಕಂಟೇನರ್ಗಳನ್ನು ಹೈಜಾಕ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. 2025ರ ಅಕ್ಟೋಬರ್ 16ರಂದು ಈ ಭಾರೀ ದರೋಡೆ ನಡೆದಿದ್ದು, ಈಗ ಪ್ರಕರಣದ ವಿವರಗಳು ಬಹಿರಂಗವಾಗಿವೆ.

ಚೋರ್ಲಾ ಘಾಟ್ ಪ್ರದೇಶದಲ್ಲಿ ನಡೆದ ಈ ದರೋಡೆ ಪ್ರಕರಣ ಇದೀಗ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಮೂರು ರಾಜ್ಯಗಳ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಕರಣ ಸಂಬಂಧ ನಾಸಿಕ್ ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿದ್ದು, ಇನ್ನೂ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸಂದೀಪ್ ಪಾಟೀಲ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ರಾತ್ರಿ ವೇಳೆ ಎರಡು ದೊಡ್ಡ ಕಂಟೇನರ್ಗಳಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 400 ಕೋಟಿ ರೂಪಾಯಿ ಹಣವನ್ನು ದರೋಡೆ ಮಾಡಲಾಗಿದೆ ಎಂದು ಅವರು ದೂರಿದ್ದಾರೆ. ಈ ಹಣ ಗೋವಾ ಮೂಲಕ ಬಾಲಾಜಿ ಟ್ರಸ್ಟ್ಗೆ ಸಾಗಿಸಲಾಗುತ್ತಿತ್ತು ಎಂದು ಹೇಳಿರುವ ಪಾಟೀಲ್, ದರೋಡೆಗೆ ಒಳಗಾದ ಹಣದಲ್ಲಿ ರೂ. 2000 ಮುಖಬೆಲೆಯ ಹಳೆಯ ನೋಟುಗಳೂ ಸೇರಿದ್ದವು ಎಂದು ತಿಳಿಸಿದ್ದಾರೆ.
ಈ ನಗದು ಹಣ ಬೆಳಗಾವಿ ಮೂಲದ ಬಿಲ್ಡರ್ ಕಿಶೋರ್ ಅವರಿಗೆ ಸೇರಿದ್ದಾಗಿದ್ದು, ದರೋಡೆ ಬಳಿಕ ಹಣ ಬಿಡುಗಡೆಗಾಗಿ ರೂ. 100 ಕೋಟಿ ರೂಪಾಯಿ ಬೇಡಿಕೆ ಇಡಲಾಗಿದೆ ಎಂದು ಸಂದೀಪ್ ಪಾಟೀಲ್ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡು ಬಿಲ್ಡರ್ ಕಿಶೋರ್ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ಪಾಟೀಲ್ ಹೇಳಿದ್ದಾರೆ. ಆರೋಪಿಗಳು ತಮ್ಮ ಹೆಸರು ಹೇಳಿಕೊಂಡು ಮಾತನಾಡಿದ್ದಾರೆ ಎಂಬುದನ್ನೂ ಅವರು ತಿಳಿಸಿದ್ದಾರೆ. ಸಂದೀಪ್ ಪಾಟೀಲ್ ಅವರ ಹೇಳಿಕೆಯಂತೆ, ಅಕ್ಟೋಬರ್ 22ರಂದು ಕಿಶೋರ್ ಅವರ ಆಪ್ತ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ವಿಶಾಲ್ ನಾಯ್ಡು ಮತ್ತು ಸುನೀಲ್ ಧುಮಾಳೆ ಎಂಬವರು ತಮ್ಮನ್ನು ಪ್ರಶ್ನೆಗೊಳಪಡಿಸಿ, “ನಿನ್ನೆ ನಮ್ಮ ಮಾಲೀಕರ ಲಾರಿಯನ್ನು ನೀನೇ ದರೋಡೆ ಮಾಡಿದ್ದೀಯ” ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ.
“ನಾನು ದರೋಡೆ ಮಾಡಿಲ್ಲ ಎಂದು ವಿವರಿಸಲು ಪ್ರಯತ್ನಿಸಿದೆ. ಆದರೆ ಕಿಶೋರ್ ಮತ್ತು ವಿರಾಟ್ ಗಾಂಧಿ ನನ್ನ ತಲೆಗೆ ಗನ್ ಇಟ್ಟು ಜೀವ ಬೆದರಿಕೆ ಹಾಕಿದರು. ನಂತರ ನನ್ನನ್ನು ಕಾರಿನಲ್ಲಿ ಹಾಕಿ ಬಿಟ್ಟುಹೋದರು” ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ. ಈ ಘಟನೆ ಬಳಿಕ ಕೆಲವು ದಿನಗಳು ತಾವು ಮಾನಸಿಕವಾಗಿ ಸಂಪೂರ್ಣ ಕುಸಿದಿದ್ದೆನೆ ಎಂದು ಅವರು ತಿಳಿಸಿದ್ದಾರೆ. ನಂತರ ತನಗೆ ಲಭ್ಯವಾದ ಮಾಹಿತಿಯ ಪ್ರಕಾರ, ಈ ದರೋಡೆ ನಡೆಸಿದ್ದು ವಿಶಾಲ್ ನಾಯ್ಡು ಮತ್ತು ವಿರಾಟ್ ಗಾಂಧಿ ಆಗಿದ್ದು, ಇವರಿಬ್ಬರೂ ಬಿಲ್ಡರ್ ಕಿಶೋರ್ ಅವರ ಆಪ್ತ ಸ್ನೇಹಿತರು ಎಂಬುದು ಗೊತ್ತಾಗಿದೆ ಎಂದು ಪಾಟೀಲ್ ಹೇಳಿದ್ದಾರೆ. ಈ ವಿಷಯವನ್ನು ಧೈರ್ಯವಾಗಿ ಕಿಶೋರ್ ಅವರಿಗೆ ತಿಳಿಸಿದಾಗ, “ನೀನು ಸುಮ್ಮನೆ ಇರು” ಎಂದು ಸಲಹೆ ನೀಡಿದರು ಎಂದು ಅವರು ಆರೋಪಿಸಿದ್ದಾರೆ.
ಸಂದೀಪ್ ಪಾಟೀಲ್ ಅವರ ಪ್ರಕಾರ, ಕಂಟೇನರ್ನಲ್ಲಿ ಕೇವಲ ರೂ.400 ಕೋಟಿ ಮಾತ್ರವಲ್ಲ, ಸುಮಾರು ರೂ.1,000 ಕೋಟಿ ಮೌಲ್ಯದ ಹಳೆಯ ನೋಟುಗಳು ಇದ್ದವು. ವಕೀಲರ ಸಲಹೆ ಮೇರೆಗೆ ಅವರು ವಿರಾಟ್ ಗಾಂಧಿ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ. ಡಿಸೆಂಬರ್ 17ರಂದು ನಾಸಿಕ್ ಎಸ್ಪಿಯನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದು, ದೂರು ನೀಡಿ 14 ದಿನಗಳಾದರೂ ಆರೋಪಿಗಳ ಬಂಧನವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಭಾರೀ ದರೋಡೆ, ಬೆದರಿಕೆ ಹಾಗೂ ಅಪಹರಣ ಆರೋಪಗಳ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಪೊಲೀಸ್ ಇಲಾಖೆಯ ಮುಂದಿನ ತನಿಖೆ ಮತ್ತು ಕ್ರಮಗಳ ಮೇಲೆ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ.