ನವದೆಹಲಿ, ಜ. 26 (DaijiworldNews/TA): ದೇಶದಾದ್ಯಂತ ಇಂದು 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಮತ್ತು ರಾಷ್ಟ್ರಾಭಿಮಾನದಿಂದ ಆಚರಿಸಲಾಯಿತು. ದೆಹಲಿಯ ಕರ್ತವ್ಯಪಥದಿಂದ ಹಿಡಿದು ಬೆಂಗಳೂರಿನ ಮಾಣೆಕ್ ಶಾ ಮೈದಾನ, ಮಂಗಳೂರು ನೆಹರು ಮೈದಾನದವರೆಗೆ ವಿವಿಧೆಡೆ ಗಣರಾಜ್ಯೋತ್ಸವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು. ಈ ವರ್ಷದ ಗಣರಾಜ್ಯೋತ್ಸವವು ಹಲವು ವಿಶೇಷ ಕಾರಣಗಳಿಂದ ಇತಿಹಾಸಾತ್ಮಕ ಮಹತ್ವವನ್ನು ಪಡೆದಿದೆ.

ವಂದೇ ಮಾತರಂಗೆ 150 ವರ್ಷ : ಈ ವರ್ಷದ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆ ಎಂದರೆ ಬಂಕಿಮಚಂದ್ರ ಚಟರ್ಜಿ ಅಮರ ಗೀತೆಯಾದ ‘ವಂದೇ ಮಾತರಂ’ ರಚನೆಯ 150ನೇ ವರ್ಷಾಚರಣೆ. ಈ ಸಂಭ್ರಮವನ್ನು ವರ್ಷಪೂರ್ತಿ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು 2025ರ ನವೆಂಬರ್ 7ರಂದು ಕರೆ ನೀಡಿದ್ದರು.
ಥೀಮ್: “ಸಮೃದ್ಧಿ ಕಾ ಮಂತ್ರ – ಆತ್ಮನಿರ್ಭರ ಭಾರತ” : ರಾಷ್ಟ್ರದ ಸ್ವಾವಲಂಬನೆ, ಅಭಿವೃದ್ಧಿ ಮತ್ತು ಕಳೆದ ವರ್ಷದ ಸಾಧನೆಗಳನ್ನು ಪ್ರತಿಬಿಂಬಿಸುವಂತೆ ಈ ವರ್ಷದ ಗಣರಾಜ್ಯೋತ್ಸವದ ಕೇಂದ್ರ ಥೀಮ್ ರೂಪುಗೊಂಡಿತ್ತು.
ಆಪರೇಷನ್ ಸಿಂದೂರ್ – ಭಯೋತ್ಪಾದನೆ ವಿರುದ್ಧ ದಿಟ್ಟ ಸಂದೇಶ : ಪರೇಡ್ನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ‘ಆಪರೇಷನ್ ಸಿಂದೂರ್’ ಮತ್ತು ‘ಮಿಷನ್ ಸುದರ್ಶನ ಚಕ್ರ’ ಥೀಮ್ಗಳು ಗಮನ ಸೆಳೆದವು. 2025ರ ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ ಭಾರತದ ದಿಟ್ಟ ಪ್ರತಿಕ್ರಿಯೆಯನ್ನು ಈ ಸ್ತಬ್ಧಚಿತ್ರಗಳ ಮೂಲಕ ಪ್ರದರ್ಶಿಸಲಾಯಿತು.
ಸೇನೆಯ ಶಕ್ತಿ ಪ್ರದರ್ಶನ : ಕರ್ತವ್ಯಪಥದಲ್ಲಿ ಭಾರತೀಯ ಸೇನೆಯ ಆಧುನಿಕ ಯುದ್ಧ ಸನ್ನದ್ಧತೆ ಮತ್ತು ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು. ಪ್ಯಾರಾಶೂಟ್ ರೆಜಿಮೆಂಟ್, ಬ್ರಿಗೇಡ್ ಆಫ್ ದಿ ಗಾರ್ಡ್ಸ್ ಹಾಗೂ ರಜಪೂತಾನ ರೈಫಲ್ಸ್ನ 75 ಸಂಗೀತಗಾರರ ತಂಡವು ಲತಾ ಮಂಗೇಶ್ಕರ್ ಅವರು ಹಾಡಿರುವ ‘ವಂದೇ ಮಾತರಂ’ನ ಆವೃತ್ತಿಯನ್ನು ನುಡಿಸಿ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿತು.
ಆಯುಷ್ + ಎಐ = ಆರೋಗ್ಯದ ಭವಿಷ್ಯ : ‘ಆಯುಷ್ ಕಾ ತಂತ್ರ, ಸ್ವಾಸ್ಥ್ಯ ಕಾ ಮಂತ್ರ’ ಎಂಬ ವಿಷಯದಡಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನು ಕೃತಕ ಬುದ್ಧಿಮತ್ತೆಯೊಂದಿಗೆ ಸಂಯೋಜಿಸಿದ ಪ್ರದರ್ಶನ ಗಮನ ಸೆಳೆಯಿತು.
ಭವಿಷ್ಯದ ಭಾರತದ ಝಲಕ್ : ಎಐ, ನವೀಕರಿಸಬಹುದಾದ ಇಂಧನ, ಸೆಮಿಕಂಡಕ್ಟರ್ಗಳಂತಹ ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾದ ಟ್ಯಾಬ್ಲೋಗಳು ಜನಮನ್ನಣೆ ಗಳಿಸಿದವು.
ಬುಡಕಟ್ಟು ಹೋರಾಟಗಾರರಿಗೆ ಡಿಜಿಟಲ್ ಗೌರವ : ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗಾಗಿ ಭಾರತದ ಮೊದಲ ಡಿಜಿಟಲ್ ವಸ್ತುಸಂಗ್ರಹಾಲಯವನ್ನು ಸ್ತಬ್ಧಚಿತ್ರದ ಮೂಲಕ ಪರಿಚಯಿಸಲಾಯಿತು.
ಬಿಎಸ್ಎಫ್ ಒಂಟೆ ಸವಾರರ ಬ್ಯಾಂಡ್ : ವಿಶ್ವದ ಏಕೈಕ ಬಿಎಸ್ಎಫ್ ಒಂಟೆ ಸವಾರರ ಬ್ಯಾಂಡ್ ತಂಡ ಮೆರವಣಿಗೆಯಲ್ಲಿ ಭಾಗವಹಿಸಿ ವಿಶೇಷ ಆಕರ್ಷಣೆ ನೀಡಿತು.
ಭಾರತ್ ಪರ್ವ್ ಮತ್ತು ವೀರ ಗಾಥಾ 5.0 : ‘ಭಾರತ್ ಪರ್ವ್’ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಆಹಾರ, ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಲಾಯಿತು. ಇದೇ ವೇಳೆ ವೀರ ಗಾಥಾ 5.0 ಅಡಿಯಲ್ಲಿ ದೇಶಾದ್ಯಂತ 1.92 ಕೋಟಿ ವಿದ್ಯಾರ್ಥಿಗಳಿಂದ ಆಯ್ಕೆಯಾದ 100 ವಿದ್ಯಾರ್ಥಿ ವಿಜೇತರಿಗೆ ಕರ್ತವ್ಯಪಥದಲ್ಲಿ ಗೌರವ ಸಲ್ಲಿಸಲಾಯಿತು.