ನವದೆಹಲಿ, ಫೆ. 06 (DaijiworldNews/TA): ಬೋರ್ಡ್ ಪರೀಕ್ಷೆಗಳ ಹತ್ತಿರ ಬರಲಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ‘ಪರೀಕ್ಷಾ ಪೆ ಚರ್ಚಾ 2026’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಲಕ್ಷಾಂತರ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿದರು. ಕಾರ್ಯಕ್ರಮದ 9ನೇ ಆವೃತ್ತಿಯಾಗಿರುವ ಈ ಸಮಾರಂಭವು ದಾಖಲೆಯ ದಾಖಲೆ ಸೃಷ್ಟಿಸಿತು. ದೇಶದ 4.5 ಕೋಟಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡಿದ್ದು, ಸುಮಾರು 250 ವಿದ್ಯಾರ್ಥಿಗಳು ನೇರವಾಗಿ ಪ್ರಧಾನಿಯೊಂದಿಗೆ ಸಂವಾದದಲ್ಲಿ ಭಾಗಿಯಾಗಿದರು.

ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. “ಪರೀಕ್ಷೆ ಜೀವನದ ಅಂತಿಮ ಗುರಿಯಂತೆ ನೋಡಬಾರದು. ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸು ವಿಭಿನ್ನವಾಗಿರುತ್ತದೆ. ಹೋಲಿಕೆ ಮನೋಭಾವದಿಂದ ದೂರ ಉಳಿಯಬೇಕು. ವಿದ್ಯಾರ್ಥಿಗಳು ಧೈರ್ಯ, ಆತ್ಮವಿಶ್ವಾಸ ಮತ್ತು ಸಮರ್ಥ ದಿಕ್ಕು ಹೊಂದಿರಬೇಕು.” ಎಂದು ಅವರು ಹೇಳಿದರು,
ಕೇವಲ ಅಂಕೆಗಳಿಗೆ ನೆಲೆಸದೇ, ಜೀವನ ಮೌಲ್ಯಗಳ ಮೇಲೆ ಗಮನ ನೀಡಬೇಕು. ಶಿಸ್ತು, ಶ್ರಮ ಮತ್ತು ಸತತ ಪ್ರಯತ್ನವೇ ಯಶಸ್ಸಿನ ಸೂತ್ರ. ವಿದ್ಯಾರ್ಥಿಗಳು ತಮ್ಮ ಕರ್ತವ್ಯವನ್ನು ಪಾಲಿಸಲು ಮನಸ್ಸು ಇಡುವಂತೆ, ತಮ್ಮ ದಿನಚರಿಯನ್ನು ಸಮರ್ಥವಾಗಿ ನಿರ್ವಹಿಸುವಂತೆ ಮತ್ತು ಸಮಯವನ್ನು ಸಮರ್ಪಕವಾಗಿ ಬಳಸುವಂತೆ ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳಲ್ಲಿ ಆತ್ಮನಿಯಂತ್ರಣ, ಸಮಯ ನಿರ್ವಹಣೆ ಮತ್ತು ಒತ್ತಡವನ್ನು ತಗ್ಗಿಸುವುದು ಹೇಗೆ ಎಂಬುದನ್ನು ನೇರ ಉದಾಹರಣೆಗಳ ಮೂಲಕ ವಿವರಿಸಿದರು.
ಈ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಕೇವಲ ಅಂಕೆಗಳಿಗೆ ಸೀಮಿತವಲ್ಲದೆ, ಸಾಮಾಜಿಕ ಜವಾಬ್ದಾರಿ, ಪರಿಸರ ಸಂರಕ್ಷಣೆ, ಸ್ವದೇಶಿ ವಸ್ತುಗಳ ಬಳಕೆ ಮತ್ತು ಸ್ವಚ್ಚತೆ ಅಭಿಯಾನಗಳ ಮಹತ್ವವನ್ನು ಅರಿತುಕೊಳ್ಳಲು ಪ್ರೇರೇಪಿತರಾಗಿದರು. “ನೀವು ಇಂದಿನ ವಿದ್ಯಾರ್ಥಿಗಳು ಅಲ್ಲ, ನಾಳೆಯ ನಾಯಕರು. ಜ್ಞಾನ, ಮೌಲ್ಯ ಮತ್ತು ಜವಾಬ್ದಾರಿಯ ಸಮನ್ವಯದಿಂದ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ.” ಎಂದರು.
“ಪರೀಕ್ಷೆಯಲ್ಲಿ ಪೇಲ್ ಆದರೂ, ಜೀವನದಲ್ಲಿ ಫೇಲ್ ಆಗಬಾರದು. ಶಿಕ್ಷಣವು ಕೇವಲ ಅಂಕೆಗಾಗಿ ಅಲ್ಲ; ಇದು ನಿಮ್ಮ ವ್ಯಕ್ತಿತ್ವವನ್ನು, ನಿಮ್ಮ ಜವಾಬ್ದಾರಿಯನ್ನು ಮತ್ತು ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ.” ಎಂದು ಕಿವಿಮಾತು ಹೇಳಿದರು.
ಪ್ರಧಾನಿ ಅವರ ಈ ನೇರ ಸಂವಾದವು ವಿದ್ಯಾರ್ಥಿಗಳಿಗೆ ಶ್ರಮ, ಸಮರ್ಥನೀಯತೆ ಮತ್ತು ಆತ್ಮವಿಶ್ವಾಸವನ್ನು ಉತ್ತೇಜಿಸುವುದಕ್ಕೆ ಮಹತ್ವಪೂರ್ಣವಾಗಿದೆ. ಈ ವರ್ಷವೂ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮವು ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವ ಹಾಗೂ ಶಿಕ್ಷಣದ ಪ್ರಾಮುಖ್ಯತೆಯನ್ನು ಸಾರುವ ಪ್ಲಾಟ್ಫಾರ್ಮ್ ಆಗಿ ನಿಂತಿದೆ.