ನವದೆಹಲಿ, ಫೆ. 10 (DaijiworldNews/TA): ಭಾರತ-ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘PRನಿಂದ ಮುಚ್ಚಿಟ್ಟ ದ್ರೋಹ’ ಎಂದು ಕಿಡಿಕಾರಿದ್ದಾರೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಷರತ್ತಿಗೆ ಒಪ್ಪಿಕೊಳ್ಳುವ ಮೂಲಕ ಭಾರತ ತನ್ನ ಕಾರ್ಯತಂತ್ರದ ಸ್ವಾಯತ್ತತೆ ಮತ್ತು ಸಾರ್ವಭೌಮತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಮಾತನಾಡಿದ ಖರ್ಗೆ, ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ದೇಶದ ಕಾರ್ಯತಂತ್ರದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದರ ಜೊತೆಗೆ ಕೃಷಿ, ಹೈನುಗಾರಿಕೆ ಮತ್ತು ಜವಳಿ ಕ್ಷೇತ್ರಗಳನ್ನು ಗಂಭೀರ ಸಂಕಷ್ಟಕ್ಕೆ ತಳ್ಳಲಿದೆ ಎಂದು ಆರೋಪಿಸಿದರು. ಈ ಒಪ್ಪಂದ ನಿಜಕ್ಕೂ ಭಾರತದ ಆರ್ಥಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುತ್ತಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕೆಂದು ಅವರು ಆಗ್ರಹಿಸಿದರು.
ಫೆಬ್ರವರಿ 6ರಂದು ಬಿಡುಗಡೆಯಾದ ಭಾರತ–ಅಮೆರಿಕ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸದ ಹಲವು ಷರತ್ತುಗಳನ್ನು, ಫೆಬ್ರವರಿ 9ರಂದು ಶ್ವೇತಭವನ ಬಿಡುಗಡೆ ಮಾಡಿದ ಫ್ಯಾಕ್ಟ್ ಶೀಟ್ನಲ್ಲಿ ಸದ್ದಿಲ್ಲದೆ ಸೇರಿಸಲಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ. ವಿಶೇಷವಾಗಿ, ಅಮೆರಿಕ ವಿಧಿಸಿದ್ದ ಹೆಚ್ಚುವರಿ 25 ಪ್ರತಿಶತ ಸುಂಕವನ್ನು ತೆಗೆದುಹಾಕಲು, ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಬದ್ಧತೆ ತೋರಿಸಬೇಕೆಂಬ ಷರತ್ತು ಸೇರಿರುವುದು ಗಂಭೀರ ವಿಷಯ ಎಂದು ಅವರು ಹೇಳಿದ್ದಾರೆ. ಇದು ಭಾರತದ ಸಾರ್ವಭೌಮತ್ವಕ್ಕೆ ನೇರ ಧಕ್ಕೆಯಾಗಿದೆ ಎಂದು ಖರ್ಗೆ ಕಿಡಿಕಾರಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ಖರ್ಗೆ, “ಇದು ಒಂದು ಬಲೆಯಾಗಿ ರೂಪಿಸಿದ ಒಪ್ಪಂದ ಎಂಬ ಸತ್ಯ ನಿಧಾನವಾಗಿ ಹೊರಬರುತ್ತಿದೆ. ಟ್ರಂಪ್ ಅವರು ರಷ್ಯಾ ತೈಲ ಕುರಿತು ಬಹಿರಂಗವಾಗಿ ಟ್ವೀಟ್ ಮಾಡಿದ್ದರೂ, ಜಂಟಿ ಹೇಳಿಕೆಯಲ್ಲಿ ಈ ವಿಷಯ ಇಲ್ಲ ಎಂದು ನಮಗೆ ತಿಳಿಸಲಾಗಿತ್ತು. ಆದರೆ ಈಗ ಶ್ವೇತಭವನದ ಫ್ಯಾಕ್ಟ್ ಶೀಟ್ನಲ್ಲಿ, ಹೆಚ್ಚುವರಿ 25% ಸುಂಕ ತೆರವುಗೊಳಿಸಲು ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ” ಎಂದು ಬರೆದಿದ್ದಾರೆ. ಮೋದಿ ಸರ್ಕಾರ ಈ ರೀತಿಯ ಒಪ್ಪಂದಕ್ಕೆ ಏಕೆ ಒಪ್ಪಿಕೊಂಡಿತು ಎಂದು ಅವರು ಪ್ರಶ್ನಿಸಿದ್ದಾರೆ.
ಕೃಷಿ ಕ್ಷೇತ್ರದ ಮೇಲೂ ಈ ಒಪ್ಪಂದ ಭಾರೀ ಪರಿಣಾಮ ಬೀರುತ್ತದೆ ಎಂದು ಖರ್ಗೆ ಎಚ್ಚರಿಸಿದ್ದಾರೆ. ಬೇಳೆಕಾಳುಗಳು ಹಾಗೂ ಜಾನುವಾರುಗಳ ಮೇವಿಗಾಗಿ ಬಳಸುವ ಜೆನೆಟಿಕಲಿ ಮಾಡಿಫೈಡ್ ಫೀಡ್ ಆಗಿರುವ ಡ್ರೈಡ್ ಡಿಸ್ಟಿಲ್ಲರ್ಸ್ ಗ್ರೇನ್ಸ್ ಮತ್ತು ಕೆಂಪು ಜೋಳವನ್ನು ಈ ಒಪ್ಪಂದದಲ್ಲಿ ಸದ್ದಿಲ್ಲದೆ ಸೇರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದರಿಂದ ದೇಶದ ಸುಮಾರು 2 ಕೋಟಿ ಹೈನುಗಾರಿಕೆ ರೈತರು ಮತ್ತು ಜಾನುವಾರುಗಳಿಗೆ ತೀವ್ರ ತೊಂದರೆ ಉಂಟಾಗಲಿದೆ ಎಂದು ಹೇಳಿದ್ದಾರೆ.
ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಸರ್ಕಾರ ದೇಶದ ಕೃಷಿ ಕ್ಷೇತ್ರವನ್ನು ವಿದೇಶಿ ಸರಕುಗಳಿಗೆ ಸಂಪೂರ್ಣವಾಗಿ ತೆರೆದಿಟ್ಟಿದೆ ಎಂದು ಖರ್ಗೆ ಟೀಕಿಸಿದ್ದಾರೆ. ಫೆಬ್ರವರಿ 6ರ ಜಂಟಿ ಹೇಳಿಕೆಯಲ್ಲಿ ಇಲ್ಲದ ಬೇಳೆಕಾಳುಗಳನ್ನು ಫೆಬ್ರವರಿ 9ರ ಶ್ವೇತಭವನದ ಫ್ಯಾಕ್ಟ್ ಶೀಟ್ನಲ್ಲಿ ಸೇರಿಸಿರುವುದು ಸರ್ಕಾರದ ಉದ್ದೇಶದ ಮೇಲೆಯೇ ಅನುಮಾನ ಹುಟ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ. ಜಂಟಿ ಹೇಳಿಕೆಯಲ್ಲಿ ಪ್ರಾಣಿಗಳ ಮೇವಿಗಾಗಿ ಕೆಂಪು ಜೋಳದ ಬಳಕೆಯನ್ನು ಉಲ್ಲೇಖಿಸಿದ್ದರೂ, ನಂತರದ ಫ್ಯಾಕ್ಟ್ ಶೀಟ್ನಲ್ಲಿ ಆ ಉಲ್ಲೇಖವೇ ಮಾಯವಾಗಿದೆ ಎಂದು ಅವರು ಗಮನಸೆಳೆದಿದ್ದಾರೆ.
ಜವಳಿ ಕ್ಷೇತ್ರದ ವಿಚಾರದಲ್ಲಿಯೂ ಖರ್ಗೆ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಮೆರಿಕ ಬಾಂಗ್ಲಾದೇಶಕ್ಕೆ ಹತ್ತಿ ಮತ್ತು ಜವಳಿ ಉತ್ಪನ್ನಗಳಿಗೆ ಶೂನ್ಯ ಸುಂಕದ ಪ್ರವೇಶ ನೀಡಿದ್ದು, ಭಾರತಕ್ಕೆ ಮಾತ್ರ 18 ಪ್ರತಿಶತ ಸುಂಕ ವಿಧಿಸಿರುವುದನ್ನು ಅವರು ಪ್ರಶ್ನಿಸಿದ್ದಾರೆ. ಇದರಿಂದ ತಿರುಪುರ್ ಮತ್ತು ಸೂರತ್ನಂತಹ ಭಾರತದ ಪ್ರಮುಖ ಜವಳಿ ಕೇಂದ್ರಗಳು ಭಾರೀ ನಷ್ಟಕ್ಕೆ ಒಳಗಾಗುತ್ತಿವೆ ಎಂದು ಹೇಳಿದ್ದಾರೆ.
ಮೋದಿ ಸರ್ಕಾರ 18 ಪ್ರತಿಶತ ಸುಂಕವನ್ನು ‘ಐತಿಹಾಸಿಕ ಗೆಲುವು’ ಎಂದು ಬಿಂಬಿಸುತ್ತಿದ್ದರೆ, ಅಮೆರಿಕ–ಬಾಂಗ್ಲಾದೇಶ ಒಪ್ಪಂದವು ಇದು ಕಾರ್ಯತಂತ್ರದ ಶರಣಾಗತಿಯೇ ಎಂಬುದನ್ನು ತೋರಿಸುತ್ತದೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬಾಂಗ್ಲಾದೇಶಕ್ಕೆ ಶೂನ್ಯ ಸುಂಕದ ಅವಕಾಶ ನೀಡಿ, ಭಾರತೀಯ ರೈತರು ಮತ್ತು ಕೈಗಾರಿಕೆಗಳನ್ನು ಕಡೆಗಣಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಒಪ್ಪಂದವು ಭಾರತೀಯ ಹತ್ತಿ ಮತ್ತು ಸಿದ್ಧ ಉಡುಪು ಉದ್ಯಮಕ್ಕೆ ‘ಡಬಲ್ ಹೊಡೆತ’ ನೀಡಿದೆ ಎಂದು ಹೇಳಿದ ಖರ್ಗೆ, ಕೊನೆಗೆ ಇದು ನಿಜವಾಗಿಯೂ ಗೆಲುವೇ ಅಥವಾ PRನಿಂದ ಮುಚ್ಚಿಟ್ಟ ದ್ರೋಹವೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.