ಭುವನೇಶ್ವರ, ಫೆ. 16 (DaijiworldNews/AA): ಕಚ್ಚಾ ಬಾಂಬ್ ತಯಾರಿಕೆ ವೇಳೆ ಆಕಸ್ಮಿಕ ಸ್ಫೋಟಗೊಂಡ ಪರಿಣಾಮ ರೌಡಿ ಶೀಟರ್ ಶಹನವಾಜ್ ಮಲಿಕ್ (26) ಸೇರಿ 4 ಮಂದಿ ಗಾಯಗೊಂಡ ಘಟನೆ ಒಡಿಶಾದಲ್ಲಿ ಸಂಭವಿಸಿದೆ.

ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಸುಂದರಪಾದ ಪ್ರದೇಶದ ಅಜಾದ್ ನಗರದ ಮನೆಯೊಂದರ ತಾರಸಿಯಲ್ಲಿ ಬಾಂಬ್ ತಯಾರಿಕೆ ವೇಳೆ ಆಕಸ್ಮಿಕವಾಗಿ ಬಾಂಬ್ ಸ್ಫೋಟಗೊಂಡಿದೆ. ಕಚ್ಚಾ ಬಾಂಬ್ಗಳನ್ನು ಜೋಡಿಸುತ್ತಿದ್ದ ಮನೆಯೊಳಗೆ ಈ ಅವಘಡ ನಡೆದಿದೆ.
ಈ ವೇಳೆ ತಾರಸಿಯಲ್ಲಿದ್ದ ರೌಡಿ ಶೀಟರ್ ಶಹನವಾಜ್ ಮಲಿಕ್ ಸೇರಿದಂತೆ ಆತನ 4 ಕುಟುಂಬಸ್ಥರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಹನವಾಜ್ ಅವರ ತಾಯಿ ಲಿಜಾತುನ್ ಬೀಬಿ (51), ಅವರ ನಿಶ್ಚಿತಾರ್ಥದ ಪತ್ನಿ ತೃಪ್ತಿಮಯೀ ಮಹಲ್ (23) ಮತ್ತು ಸ್ನೇಹಿತ ಅಮಿಯಾ ರಂಜನ್ ಮಲ್ಲಿಕ್ (27) ಸ್ಫೋಟದಲ್ಲಿ ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ ಜನವರಿ 27ರಂದು ಈ ಘಟನೆ ನಡೆದಿದ್ದು, ಸ್ಫೋಟದ ಸಿಸಿಟಿವಿ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರೌಡಿ ಶೀಟರ್ ಶಾನವಾಜ್ ನವಾಬ್ ಮನೆಯ ತಾರಸಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಏಕಾಏಕಿ ಸ್ಫೋಟಗೊಂಡಿರುವುದನ್ನು ಕಾಣಬಹುದಾಗಿದೆ.
ಇನ್ನು ಈ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಒಡಿಶಾ ಪೊಲೀಸರು ಎನ್ಐಎಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದ ಎನ್ಐಎ ತಂಡವು ಸ್ಥಳೀಯ ಪೊಲೀಸರ ಸಹಯೋಗದೊಂದಿಗೆ ತನಿಖೆ ನಡೆಸುತ್ತಿದೆ. ಘಟನಾ ಸ್ಥಳಕ್ಕೆ ಸಾಕ್ಷ್ಯಗಳು ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಲು ವೈಜ್ಞಾನಿಕ ತಂಡ ಭೇಟಿ ನೀಡಿದೆ.