ನವದೆಹಲಿ, ಫೆ. 17 (DaijiworldNews/AA): ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್ಪೋ 2026 ಆಲೋಚನೆ, ಆವಿಷ್ಕಾರ, ನಾವೀನ್ಯತೆ ಮತ್ತು ಉದ್ದೇಶಗಳ ಪ್ರಬಲ ಸಂಗಮ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ಭಾರತದ ಎಐ ಇಂಪ್ಯಾಕ್ಟ್ ಎಕ್ಸ್ಪೋ 2026 ಕಲ್ಪನೆಗಳು, ನಾವೀನ್ಯತೆ ಮತ್ತು ಉದ್ದೇಶಗಳ ಪ್ರಬಲ ಸಂಗಮವಾಗಿದೆ. ಜಾಗತಿಕ ಒಳಿತಿಗಾಗಿ ಕೃತಕ ಬುದ್ಧಿಮತ್ತೆಯ ಭವಿಷ್ಯವನ್ನು ರೂಪಿಸುವಲ್ಲಿ ಇದು ಭಾರತೀಯ ಪ್ರತಿಭೆಗಳ ಅಸಾಧಾರಣ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಮಾನವ ಪ್ರಗತಿಗಾಗಿ ಎಐಅನ್ನು ಜವಾಬ್ದಾರಿಯುತವಾಗಿ, ಸಮಗ್ರವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವ ಭಾರತದ ಬದ್ಧತೆಯನ್ನು ಎಕ್ಸ್ಪೋ ಪುನರುಚ್ಚರಿಸಿದೆ" ಎಂದು ಹೇಳಿದರು.
"ಸರ್ವಜನ ಹಿತಾಯ, ಸರ್ವಜನ ಸುಖಾಯ ಅಥವಾ ಎಲ್ಲರಿಗೂ ಕಲ್ಯಾಣ, ಎಲ್ಲರಿಗೂ ಸಂತೋಷ, ಇದು ಮಾನವ ಕೇಂದ್ರಿತ ಪ್ರಗತಿಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಎಕ್ಸ್ಪೋವು ಜಾಗತಿಕ ತಂತ್ರಜ್ಞಾನ ಘಟಕ, ಸ್ಟಾರ್ಟ್ಅಪ್, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಯನ್ನು ಒಂದೇ ವೇದಿಕೆಗೆ ತಂದಿದೆ" ಎಂದು ತಿಳಿಸಿದರು.