ನವದೆಹಲಿ, ಫೆ. 20 (DaijiworldNews/TA): ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಭದ್ರತೆಯನ್ನು ಭೇದಿಸಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಭಾರತ್ ಮಂಟಪಂ ನಲ್ಲಿ ನಡೆಯುತ್ತಿದ್ದ ‘ಇಂಡಿಯಾ ಎಐ ಇಂಪ್ಯಾಕ್ಟ್’ ಶೃಂಗಸಭೆ ವೇಳೆ ಈ ಘಟನೆ ನಡೆದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜಿ ಮಾಡಿಕೊಂಡಿದ್ದಾರೆ ಎಂದು ಘೋಷಣೆ ಕೂಗುತ್ತಾ, ಮೋದಿ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೋಟೋ ಹೊಂದಿದ್ದ ಅಂಗಿಯನ್ನು ಕೈಯಲ್ಲಿ ಹಿಡಿದುಕೊಂಡು ಕೆಲವರು ಅರೆನಗ್ನರಾಗಿ ಸಭಾಂಗಣದೊಳಗೆ ಓಡಾಡಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಗಂಭೀರವಾಗುವ ಮುನ್ನವೇ ಪೊಲೀಸರು ಹಸ್ತಕ್ಷೇಪಿಸಿ ನಾಲ್ವರನ್ನು ಬಂಧಿಸಿದ್ದು, ಇತರರ ವಿಚಾರಣೆ ಮುಂದುವರಿದಿದೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆ ನಂತರ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇಷ್ಟು ಬಿಗಿ ಭದ್ರತೆಯಿದ್ದ ಸ್ಥಳದೊಳಗೆ ಅವರು ಹೇಗೆ ಪ್ರವೇಶಿಸಿದರು ಎಂಬ ಕುರಿತು ಚರ್ಚೆ ಜೋರಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಅಡಿಷನಲ್ ಪೊಲೀಸ್ ಕಮಿಷನರ್ ದೇವೇಶ್ ಕುಮಾರ್ ಮಹ್ಲಾ, “ಯೂತ್ ಕಾಂಗ್ರೆಸ್ ಕಾರ್ಯಕರ್ತರು ಎಂದು ಹೇಳಿಕೊಂಡಿರುವ ಗುಂಪೊಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಒಳನುಗ್ಗಿತ್ತು. ಅವರು ಸ್ವೆಟರ್ ಹಾಗೂ ಜಾಕೆಟ್ ಧರಿಸಿದ್ದರಿಂದ ಅವರ ಟೀ-ಶರ್ಟ್ ಮೇಲಿದ್ದ ಮೋದಿ ಮತ್ತು ಟ್ರಂಪ್ ಫೋಟೋ ಹಾಗೂ ಘೋಷಣೆಗಳು ಭದ್ರತಾ ಸಿಬ್ಬಂದಿಗೆ ಗೋಚರಿಸಲಿಲ್ಲ. ಒಳಗೆ ಬಂದ ನಂತರ ಜಾಕೆಟ್ ತೆಗೆದು ಘೋಷಣೆ ಕೂಗತೊಡಗಿದರು. ವಿಷಯ ತಿಳಿಯುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಅವರನ್ನು ವಶಕ್ಕೆ ಪಡೆದಿದ್ದೇವೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ತಿಳಿಸಿದ್ದಾರೆ.
ಸಭಾಂಗಣದಲ್ಲಿ ಈ ಘಟನೆಯಿಂದ ಕೆಲಕಾಲ ಅವ್ಯವಸ್ಥೆ ಉಂಟಾಗಿದ್ದು, ಕಾರ್ಯಕ್ರಮ ತಾತ್ಕಾಲಿಕವಾಗಿ ಅಸ್ತವ್ಯಸ್ತಗೊಂಡಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಟೀ-ಶರ್ಟ್ಗಳನ್ನು ತೆಗೆದು ಗಾಳಿಯಲ್ಲಿ ಬೀಸುತ್ತಾ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಘಟನೆಯ ಬಳಿಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಕಟ್ಟು ನಿಟ್ಟಾಗಿಸಲಾಗಿದೆ. ತನಿಖೆ ಮುಂದುವರಿದಿದ್ದು, ಉಳಿದವರ ಪಾತ್ರದ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.