ನವದೆಹಲಿ, ಫೆ. 21 (DaijiworldNews/TA): ಯಶಸ್ಸಿನ ಹಾದಿಯಲ್ಲಿ ಸವಾಲುಗಳು ಸಹಜ. ವಿಶೇಷವಾಗಿ ಇಂಗ್ಲಿಷ್ ಪ್ರಾವೀಣ್ಯತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಇಂದಿನ ಜಗತ್ತಿನಲ್ಲಿ, ಭಾಷಾ ಅಡೆತಡೆಗಳು ದೊಡ್ಡ ಅಡ್ಡಿಯಾಗಬಹುದು. ಆದರೆ ಕೆಲವರಿಗೆ ಇದೇ ಸವಾಲುಗಳು ಸಾಧನೆಗೆ ಇಂಧನವಾಗುತ್ತವೆ. ಮಧ್ಯಪ್ರದೇಶದ ಸತ್ನಾ ಗ್ರಾಮದ ಸರಳ ಹಿನ್ನೆಲೆಯಿಂದ ಬಂದ ಸುರಭಿ ಗೌತಮ್ ಅವರ ಜೀವನ ಪಯಣ ಅದಕ್ಕೆ ಜೀವಂತ ಉದಾಹರಣೆ.

ಒಮ್ಮೆ ಇಂಗ್ಲಿಷ್ನಲ್ಲಿ ಮಾತನಾಡಲು ಹೆಣಗಾಡಿದ ಕಾರಣಕ್ಕೆ ಸಹಪಾಠಿಗಳಿಂದ ಅಪಹಾಸ್ಯಕ್ಕೊಳಗಾಗಿದ್ದ ಸುರಭಿ, ಇಂದು ಐಎಎಸ್ ಅಧಿಕಾರಿಯಾಗಿ ದೇಶ ಸೇವೆಯಲ್ಲಿ ತೊಡಗಿದ್ದಾರೆ. ಯುಪಿಎಸ್ಸಿ ಸೇರಿದಂತೆ ಇಸ್ರೋ ಮತ್ತು ಬಿಎಆರ್ಸಿ ಸೇರಿದಂತೆ ಎಂಟು ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಗಳನ್ನು ಪಡೆದಿರುವುದು ಅವರ ಸಾಧನೆಯ ಮೆರಗು. ಆತ್ಮವಿಶ್ವಾಸ ಕಳೆದುಕೊಂಡ ವಿದ್ಯಾರ್ಥಿನಿಯಿಂದ ನಾಗರಿಕ ಸೇವಾ ಅಧಿಕಾರಿಯಾಗುವವರೆಗಿನ ಅವರ ಪಯಣ ದೃಢಸಂಕಲ್ಪ ಮತ್ತು ಸ್ಥೈರ್ಯದ ಶಕ್ತಿಯನ್ನು ಸಾರುತ್ತದೆ.
ಸತ್ನಾ ಎಂಬ ಹಳ್ಳಿಯಲ್ಲಿ ಬೆಳೆದ ಸುರಭಿಗೆ ಉತ್ತಮ ತರಬೇತಿ ಅಥವಾ ಸಂಪನ್ಮೂಲಗಳ ಅವಕಾಶ ಹೆಚ್ಚು ಇರಲಿಲ್ಲ. ಆದರೂ, ಅವರು ತಮ್ಮ ತರಗತಿಯಲ್ಲಿ ಸದಾ ಅಗ್ರಸ್ಥಾನದಲ್ಲಿದ್ದರು. 10ನೇ ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರು. ಅವರ ಪೋಷಕರು-ಒಬ್ಬರು ವಕೀಲರು ಮತ್ತು ಮತ್ತೊಬ್ಬರು ಶಿಕ್ಷಕರು-ಶಿಕ್ಷಣದ ಮಹತ್ವ ಮತ್ತು ಕಠಿಣ ಪರಿಶ್ರಮದ ಮೌಲ್ಯವನ್ನು ಅವರಿಗೆ ಕಲಿಸಿದರು.
ಭೋಪಾಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ನಲ್ಲಿ ಬಿಟೆಕ್ಗೆ ಸೇರ್ಪಡೆಯಾದಾಗ ಅವರ ಮುಂದೆ ನಿಜವಾದ ಸವಾಲು ಎದುರಾಯಿತು. ಹಿಂದಿ ಮಾಧ್ಯಮದಲ್ಲಿ ಕಲಿತ ಹಿನ್ನೆಲೆಯಿಂದ ಇಂಗ್ಲಿಷ್ನಲ್ಲಿ ಸಂವಹನ ಮಾಡುವುದು ಕಷ್ಟವಾಯಿತು. ಮೊದಲ ದಿನವೇ ಇಂಗ್ಲಿಷ್ನಲ್ಲಿ ತನ್ನನ್ನು ಪರಿಚಯಿಸಿಕೊಳ್ಳಲು ಆಗದೆ ಸಹಪಾಠಿಗಳಿಂದ ಅಪಹಾಸ್ಯಕ್ಕೊಳಗಾದರು. ಭೌತಶಾಸ್ತ್ರ ತರಗತಿಯಲ್ಲಿ ಇಂಗ್ಲಿಷ್ನಲ್ಲಿ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಾಗದೆ ಶಿಕ್ಷಕರಿಂದ ಟೀಕೆ ಎದುರಿಸಿದರು. ಒಂದು ಕ್ಷಣ ಅವರು ಕಾಲೇಜು ಬಿಟ್ಟು ಮನೆಗೆ ಹಿಂತಿರುಗುವ ಯೋಚನೆಯನ್ನೂ ಮಾಡಿಕೊಂಡಿದ್ದರು.
ಆದರೆ ಅವರ ತಾಯಿಯ ಮಾತುಗಳು ಅವರಿಗೆ ಹೊಸ ದಿಕ್ಕು ನೀಡಿದವು: “ನೀನು ಈಗ ಹಿಂದಿರುಗಿದರೆ, ನಿನ್ನ ಕನಸುಗಳನ್ನು ಮಾತ್ರವಲ್ಲ, ಈ ಹಳ್ಳಿಯಲ್ಲಿ ನಿನ್ನನ್ನು ನೋಡುವ ಪ್ರತಿಯೊಬ್ಬ ಹುಡುಗಿಯ ಆಶೆಯನ್ನು ಮುರಿಯುತ್ತೀಯ.” ಈ ಮಾತುಗಳು ಸುರಭಿಗೆ ಪ್ರೇರಣೆಯಾಯಿತು.
ಅವರು ಇಂಗ್ಲಿಷ್ ಸುಧಾರಣೆಗೆ ದಿನವೂ ಶ್ರಮಿಸಲು ಆರಂಭಿಸಿದರು. ಎಂಜಿನಿಯರಿಂಗ್ ಪುಸ್ತಕಗಳನ್ನು ಓದಿದರು, ಹೊಸ ಪದಗಳನ್ನು ಕಲಿತರು, ಆತ್ಮವಿಶ್ವಾಸವನ್ನು ಬೆಳೆಸಿಕೊಂಡರು. ಭಾಷಾ ಅಡೆತಡೆಯನ್ನು ಜಯಿಸಿ, ಮೊದಲ ಸೆಮಿಸ್ಟರ್ ಪರೀಕ್ಷೆಗಳಲ್ಲಿ ವಿಶ್ವವಿದ್ಯಾಲಯದಲ್ಲೇ ಅಗ್ರಸ್ಥಾನ ಪಡೆದರು.
2013ರಲ್ಲಿ ಭಾರತೀಯ ಎಂಜಿನಿಯರಿಂಗ್ ಸೇವೆ (IES) ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದರು. 2016ರಲ್ಲಿ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 50ನೇ ರ್ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾದರು. ಇಸ್ರೋ ಮತ್ತು ಬಿಎಆರ್ಸಿ ಪರೀಕ್ಷೆಗಳಲ್ಲಿಯೂ ಅವರು ಉತ್ತಮ ಸಾಧನೆ ತೋರಿದರು.
ಒಮ್ಮೆ ಇಂಗ್ಲಿಷ್ನ ಕಾರಣಕ್ಕೆ ಅಪಹಾಸ್ಯಕ್ಕೊಳಗಾದ ಹಳ್ಳಿ ಹುಡುಗಿಯಿಂದ, ಬಹು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆದ ಐಎಎಸ್ ಅಧಿಕಾರಿವರೆಗೆ ಸುರಭಿ ಗೌತಮ್ ಅವರ ಪಯಣ ಅಸಂಖ್ಯಾತ ಯುವಕರಿಗೆ ಸ್ಫೂರ್ತಿಯಾಗಿದೆ. ಪ್ರತಿಕೂಲ ಪರಿಸ್ಥಿತಿಯ ನಡುವೆಯೂ, ದೃಢಸಂಕಲ್ಪ, ಪರಿಶ್ರಮ ಮತ್ತು ಆತ್ಮವಿಶ್ವಾಸ ಇದ್ದರೆ ಯಾವುದೇ ಅಡೆತಡೆಯನ್ನೂ ಮೀರಿ ಯಶಸ್ಸನ್ನು ಸಾಧಿಸಬಹುದು ಎಂಬುದನ್ನು ಅವರ ಜೀವನ ಪಯಣವೇ ಸಾಕ್ಷಿ.