ಕೋಲ್ಕತ್ತಾ, ಫೆ. 23 (DaijiworldNews/TA): ಪಶ್ಚಿಮ ಬಂಗಾಳ ರಾಜಕೀಯದ ಪ್ರಮುಖ ಮುಖ ಹಾಗೂ ‘ರಾಜಕೀಯ ಚಾಣಕ್ಯ’ ಎಂದೇ ಖ್ಯಾತರಾಗಿದ್ದ ಮುಕುಲ್ ರಾಯ್ (71) ಅವರು ಇಂದು ಬೆಳಗಿನ ಜಾವ ನಿಧನರಾದರು. ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 1.30ರ ಸುಮಾರಿಗೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮಾಜಿ ರೈಲ್ವೆ ಸಚಿವರಾಗಿದ್ದ ರಾಯ್, ಒಂದು ಕಾಲದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕರಾಗಿದ್ದು, ಪಕ್ಷದ ಎರಡನೇ ನಾಯಕನಂತೆ ಪರಿಗಣಿಸಲ್ಪಟ್ಟಿದ್ದರು. ಕಳೆದ ಎರಡು ವರ್ಷಗಳಿಂದ ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆ ಕೋಮಾಗೆ ಜಾರಿದ್ದ ಅವರು ನೆನಪಿನ ಶಕ್ತಿಯನ್ನೂ ಕಳೆದುಕೊಂಡಿದ್ದರು. ಪರಿಚಿತ ಮುಖಗಳನ್ನು ಗುರುತಿಸಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ರೈಲ್ಸ್ ಟ್ಯೂಬ್ ಮೂಲಕ ದ್ರವ ಆಹಾರ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಅವರ ಪಾರ್ಥಿವ ಶರೀರವನ್ನು ನಿವಾಸಕ್ಕೆ ತರಲಾಗಿದ್ದು, ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ.
1998ರಲ್ಲಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸೇರಿ ತೃಣಮೂಲ ಕಾಂಗ್ರೆಸ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ರಾಯ್, ಬಳಿಕ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ತಂತ್ರಗಾರಿಕೆಯ ಮೂಲಕ ಬಂಗಾಳ ರಾಜಕೀಯದಲ್ಲಿ ಮಹತ್ವದ ಸ್ಥಾನವನ್ನು ಗಳಿಸಿದ್ದ ಅವರು, 2017ರಲ್ಲಿ ಅಚ್ಚರಿಯ ನಿರ್ಧಾರ ತೆಗೆದುಕೊಂಡು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರ್ಪಡೆಯಾದರು.
ರಾಜ್ಯದಲ್ಲಿ ಬಿಜೆಪಿಯ ಕಾರ್ಯತಂತ್ರದ ಪ್ರಮುಖ ನಾಯಕನಾಗಿದ್ದ ರಾಯ್, 2019ರ ಲೋಕಸಭಾ ಚುನಾವಣೆಯಲ್ಲಿ 42 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆಲ್ಲಲು ಪಕ್ಷಕ್ಕೆ ನೆರವಾದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು.
ಆದರೆ ಬಳಿಕ ಪಕ್ಷದೊಳಗಿನ ಅವರ ಪ್ರಭಾವ ಕುಗ್ಗತೊಡಗಿದ್ದು, ಅಂತಿಮವಾಗಿ ಅವರು ಮತ್ತೆ ತೃಣಮೂಲ ಕಾಂಗ್ರೆಸ್ ಸೇರಿದರು. ಇದೇ ಅವಧಿಯಲ್ಲಿ ಸುವೇಂದು ಅಧಿಕಾರಿ ವಿರೋಧ ಪಕ್ಷದ ನಾಯಕರಾಗಿ ಹೊರಹೊಮ್ಮಿದರು. 2025ರಲ್ಲಿ ಕಲ್ಕತ್ತಾ ಹೈಕೋರ್ಟ್ ರಾಯ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ, ಟಿಎಂಸಿಗೆ ಮರು ಸೇರ್ಪಡೆಯಾಗಿರುವುದು ಪಕ್ಷಾಂತರ ವಿರೋಧಿ ಕಾನೂನಿಗೆ ವಿರುದ್ಧ ಎಂದು ತೀರ್ಪು ನೀಡಿತ್ತು. ರಾಜಕೀಯ ಚಾಣಾಕ್ಷತೆ, ಸಂಘಟನೆ ಶಕ್ತಿ ಹಾಗೂ ತಂತ್ರಗಾರಿಕೆಯಿಂದ ಗುರುತಿಸಿಕೊಂಡಿದ್ದ ಮುಕುಲ್ ರಾಯ್ ಅವರ ನಿಧನಕ್ಕೆ ಪಶ್ಚಿಮ ಬಂಗಾಳ ರಾಜಕೀಯ ವಲಯ ಕಣ್ಣೀರಾಗಿದೆ.