ಬೆಂಗಳೂರ, 23 (DaijiworldNews/ AK): ಸುಪ್ರೀಂ ಕೋರ್ಟ್ ತೀರ್ಪುಬಂದು (ಆಗಸ್ಟ್ 1, 2024) 18 ತಿಂಗಳಾಗುತ್ತಿದೆ. ಪಕ್ಕದ ತೆಲಂಗಾಣ, ಆಂಧ್ರಪ್ರದೇಶ, ದೂರದ ಹರ್ಯಾಣ ಸರ್ಕಾರಗಳು ಆರೇ ತಿಂಗಳಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡಿ ನ್ಯಾಯ ಕೊಟ್ಟವು. ಆದರೆ ಕರ್ನಾಟಕದಲ್ಲಿ ಇನ್ನೂ ಒಳ ಮೀಸಲಾತಿ ಜಾರಿಯಾಗಿಲ್ಲ ಎಂದು ಬಿಜೆಪಿ ನಿಯೋಗವು ಇಂದು ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿ ಗಮನ ಸೆಳೆದಿದೆ.

ನ್ಯಾ ನಾಗಮೋಹನ್ ದಾಸ್ ಆಯೋಗ ರಚನೆ ಮಾದಿಗ ಸಮಾಜದ ಬೇಡಿಕೆ ಆಗಿರಲಿಲ್ಲ. ಈ ಹಿಂದೆ ತಯಾರಿಸಿದ ನ್ಯಾ ಸದಾಶಿವ ಆಯೋಗದ ವರದಿ ಮತ್ತು ಮಾಧುಸ್ವಾಮಿ ಸಮಿತಿ ವರದಿಯ ದತ್ತಾಂಶಗಳು ಸರ್ಕಾರದ ಬಳಿ ಇದ್ದವು. ಆದರೂ ಸರ್ಕಾರ ನ್ಯಾ ನಾಗಮೋಹನ ದಾಸ್ ಆಯೋಗ ರಚಿಸಿ ವರದಿ ಪಡೆಯಲು ನಿಶ್ಚಯಿಸಿತು. ಆರು ತಿಂಗಳು ಶ್ರಮವಹಿಸಿ, 110 ಕೋಟಿ ತೆರಿಗೆ ಹಣ ವ್ಯಯಿಸಿ ಆಯೋಗದಿಂದ ಶಿಫಾರಸುಗಳನ್ನು ಪಡೆಯಲಾಯಿತು ಎಂದು ನಿಯೋಗ ವಿವರಿಸಿದೆ.
ನಿಯೋಗ ನೀಡಿದ ಮನವಿಯಲ್ಲಿರುವ ಅಂಶಗಳು ಹೀಗಿವೆ.
ನ್ಯಾ ನಾಗಮೋಹನ್ ದಾಸ್ ಶಿಫಾರಸು ಹೀಗಿದೆ :
ಪ್ರವರ್ಗ 1 - 59 ಸಣ್ಣ ಅಲೆಮಾರಿ ಜಾತಿಗಳು : 1%
ಪ್ರವರ್ಗ 2 - ಮಾದಿಗ ಸಂಬಂಧಿತ ಜಾತಿಗಳು : 6%
ಪ್ರವರ್ಗ 3 - ಹೊಲೆಯ ಸಂಬಂಧಿತ ಜಾತಿಗಳು : 5 %
ಪ್ರವರ್ಗ 4 - ಭೋವಿ, ಬಂಜಾರ, ಕೊರಚ, ಕೊರಮ ಜಾತಿಗಳಿಗೆ : 4%
ಪ್ರವರ್ಗ 5 - ಮೂಲ ಜಾತಿ ಗುರುತಿಸಿಕೊಳ್ಳದೆ ಉಳಿದ AK, AD, AA: 1%
ಆದರೆ ಸರ್ಕಾರ ಈ ಶಿಫಾರಸ್ಸನ್ನು ಏಕೆ ಪರಿಗಣಿಸಲಿಲ್ಲ ? ಬದಲಾಗಿ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣಿದು 6 : 6 : 5 ರ ಹೊಸ ಸೂತ್ರ ರೂಪಿಸಿತು.
ಈ ಸೂತ್ರವನ್ನು ಯಾವ ಆಧಾರದಲ್ಲಿ ರೂಪಿಸಲಾಯಿತು? ಸರ್ಕಾರವಾಗಲಿ, ಸಚಿವರಾಗಲಿ, ಮುಖ್ಯಮಂತ್ರಿಗಳಾಗಲಿ ವಿವರಿಸಲಿಲ್ಲ. ಈ ಬಗ್ಗೆ ಸದನದಲ್ಲಿ ಮಸೂದೆ ಮಂಡಿಸಲಾಯಿತಾದರು ವಿಸ್ತೃತ ಚರ್ಚೆಗೆ ಅವಕಾಶವನ್ನೇ ಕೊಡಲಿಲ್ಲ. ರಾತ್ರಿ 7ಕ್ಕೆ ಮಸೂದೆಯನ್ನು ತಂದು ಸಂಖ್ಯಾಬಲದಿಂದ ತರಾತುರಿಯಲ್ಲಿ ಅಂಗೀಕಾರ ಪಡೆಯಲಾಯಿತು.
ಐತಿಹಾಸಿಕವಾದ ಒಳ ಮೀಸಲಾತಿಯನ್ನು ಜಾರಿ ಮಾಡುವ ಇಡೀ ಪ್ರಕ್ರಿಯೆಯಲ್ಲಿ ಸರ್ವಪಕ್ಷಗಳ ಪ್ರಮುಖರ ಸಭೆ ಮಾಡಲಿಲ್ಲ, ಸಲಹೆ ಕೇಳಲಿಲ್ಲ. ದಲಿತ ಸಂಘಟನೆಗಳ ಪ್ರಮುಖರ, ಹೋರಾಟಗಾರರ, ಕಾನೂನು ತಜ್ಞರ, ಬುದ್ಧಿಜೀವಿಗಳ ಸಭೆ ಕರೆಯಲಿಲ್ಲ. ಸದಾ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಾ ಅಹಂಕಾರದ ಮಾತುಗಳನ್ನು ಆಡುತ್ತಾ ದಿನದೂಡುವುದು ಸರ್ಕಾರದ ಹಳೇ ಚಾಳಿಯಾಗಿದೆ. ಒಳಮೀಸಲಾತಿಯೂ ಸರ್ಕಾರದ ಈ ಅಹಂಕಾರದಿಂದ ನೆಲಕಚ್ಚಿದೆ ಎಂದು ಕಿಡಿಕಾರಿದ್ದಾರೆ.