ನವದೆಹಲಿ, ಫೆ. 23 (DaijiworldNews/TA): ಕಳೆದ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಭಾರೀ ಏರಿಕೆ ಕಂಡು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿತ್ತು. ಜಾಗತಿಕ ಮಟ್ಟದಲ್ಲಿ ಅಮೂಲ್ಯ ಲೋಹಗಳಿಗೆ ಹೆಚ್ಚಿದ ಬೇಡಿಕೆಯೇ ಈ ಏರಿಕೆಗೆ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 621ನೇ ಕೇಂದ್ರೀಯ ಮಂಡಳಿ ಸಭೆಯ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ, ಚಿನ್ನದ ಆಮದು, ಹಣದುಬ್ಬರ ಹಾಗೂ ಅಮೆರಿಕದ ಟ್ಯಾರಿಫ್ ಬದಲಾವಣೆಯ ಕುರಿತು ವಿವರಿಸಿದರು.

ಸಚಿವೆ ಹೇಳುವಂತೆ, ಜಾಗತಿಕವಾಗಿ ಹಲವು ದೇಶಗಳ ಕೇಂದ್ರ ಬ್ಯಾಂಕ್ಗಳು ಚಿನ್ನ ಮತ್ತು ಬೆಳ್ಳಿಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿವೆ. ಇದರ ಪರಿಣಾಮವಾಗಿ ಬೇಡಿಕೆ ಏರಿಕೆಯಾಗಿದ್ದು, ಬೆಲೆಯೂ ಗಗನಕ್ಕೇರಿದೆ. ಭಾರತದ ಕೇಂದ್ರ ಬ್ಯಾಂಕ್ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಚಿನ್ನದ ಸಂಗ್ರಹವನ್ನು ಹಂತ ಹಂತವಾಗಿ ಹೆಚ್ಚಿಸಿಕೊಂಡಿದೆ. ಆದರೆ ಚಿನ್ನ ಮತ್ತು ಬೆಳ್ಳಿಯ ಆಮದು ಆತಂಕ ಪಡುವ ಮಟ್ಟದಲ್ಲಿಲ್ಲ ಆರ್ಬಿಐ ಈ ವಿಷಯದಲ್ಲಿ ನಿಗಾ ವಹಿಸಿದೆ ಎಂದು ಸಚಿವೆ ಸ್ಪಷ್ಟಪಡಿಸಿದರು.
ಅಮೆರಿಕ ಸರ್ಕಾರ ಟ್ಯಾರಿಫ್ ದರವನ್ನು ಮೊದಲು 10%ಕ್ಕೆ ಇಳಿಸಿ, ನಂತರ 15%ಕ್ಕೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ಭಾರತಕ್ಕೆ ಏನು ಪರಿಣಾಮ ಬೀಳಬಹುದು ಎಂಬ ಪ್ರಶ್ನೆಗೆ ಸಚಿವೆ ಪ್ರತಿಕ್ರಿಯಿಸಿದರು. “ಭಾರತದ ಆರ್ಥಿಕತೆಯ ಮೇಲೆ ತಕ್ಷಣದ ಪರಿಣಾಮದ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ವಾಣಿಜ್ಯ ಸಚಿವಾಲಯ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ. ಮುಂದಿನ ಸಂಧಾನಗಳ ವೇಳೆ ಅಮೆರಿಕಕ್ಕೆ ತೆರಳುವ ನಿಯೋಗ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಿದೆ,” ಎಂದು ಅವರು ಹೇಳಿದರು. ಒಟ್ಟಾರೆ, ಜಾಗತಿಕ ಆರ್ಥಿಕ ಪರಿಸ್ಥಿತಿ ಹಾಗೂ ಕೇಂದ್ರ ಬ್ಯಾಂಕ್ಗಳ ಖರೀದಿ ನೀತಿಗಳೇ ಚಿನ್ನ-ಬೆಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ಸರ್ಕಾರ ಸ್ಪಷ್ಟನೆ ನೀಡಿದೆ.