ಕಾರವಾರ, ಫೆ. 23 (DaijiworldNews/AA): ದಲಿತ ಸಿಎಂ ಬಗ್ಗೆ ಎಲ್ಲಾ ಕಡೆ ಚರ್ಚೆಯಾಗುತ್ತಿದೆ. ಚರ್ಚೆಯಾದ ತಕ್ಷಣ ಸಿಎಂ ಮಾಡಲು ಆಗುವುದಿಲ್ಲ, ಸಿಎಂ ಆಕಾಂಕ್ಷಿಗಳು ಹಲವರು ಇದ್ದಾರೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾವ್ಯಾರೂ ಸಿಎಂ ರೇಸ್ನಲ್ಲಿ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಐದು ವರ್ಷಕ್ಕೆ ಆಯ್ಕೆ ಮಾಡಿದ್ದಾರೆ. ಈ ಗೊಂದಲಕ್ಕೆ ಬ್ರೇಕ್ ಹಾಕಬೇಕಿದೆ. ಪಕ್ಷದಲ್ಲಿ ಈ ವಿಚಾರವಾಗಿ ಸಾಕಷ್ಟು ಗೊಂದಲ ಇದೆ. ಇದು ಬಗೆಹರಿಯಬೇಕಿದೆ" ಎಂದು ಹೇಳಿದರು.
"ಗೊಂದಲ ನಿವಾರಣೆ ಅಷ್ಟೇ ಸ್ಥಾನ ಬದಲಾವಣೆ ಇಲ್ಲ. ಪಕ್ಷದಲ್ಲಿ, ಕಾರ್ಯಕರ್ತರಲ್ಲಿ ಹಾಗೂ ನಾಯಕರಲ್ಲಿ ಗೊಂದಲವಿದೆ. ಅದು ನಿವಾರಣೆ ಆಗಬೇಕು. ಎಲ್ಲಾ ರೀತಿಯ ಚರ್ಚೆಗಳಾಗಿವೆ. ಎಲ್ಲರೂ ಸಿಎಂ ಆಗಲು ಸಾಧ್ಯವಿಲ್ಲ. ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಈಗಂತೂ ಸಿಎಂ ಇದ್ದಾರೆ. ಬದಲಾವಣೆ ಹೈಕಮಾಂಡ್ಗೆ ಬಿಟ್ಟಿದ್ದು" ಎಂದು ತಿಳಿಸಿದರು.
ಸಿಎಂ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, "ಟ್ವೀಟ್ ಮಾಡಿದ್ದ ಬಗ್ಗೆ ಅವರೇ ಹೇಳಬೇಕು. ಪಕ್ಷದಲ್ಲಿ ಸಮಸ್ಯೆ ಇದೆ. ಸರಿಯಾಗುತ್ತಾ ಇರುತ್ತದೆ ಎಂದರಲ್ಲದೇ, ಬಿಜೆಪಿ ಅವರು ಭ್ರಷ್ಟಾಚಾರದ ಬಗ್ಗೆ ಬೇರೆಯವರ ಮೇಲೆ ಆರೋಪ ಮಾಡುತ್ತಾರೆ. ಅವರ ಎಂಎಲ್ಎ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅವರೇ ತಮ್ಮ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಕೊಟ್ಟಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.