ಬೆಂಗಳೂರು,ಫೆ. 23 (DaijiworldNews/AK): ಕಾಂಗ್ರೆಸ್ಸಿನವರು ಹೆಚ್ಚು ಬಟ್ಟೆ ಬಿಚ್ಚಿಕೊಂಡರೂ ವಿಬಿ ಜಿ ರಾಮ್ ಜಿ ಯೇ ಊರ್ಜಿತವಾಗಲಿದೆ. ಆದ್ದರಿಂದ ವ್ಯರ್ಥ ಪ್ರಯತ್ನ ಮಾಡಬೇಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿ ಪ್ರಶ್ನೆಗೆ ಉತ್ತರಿಸಿದರು. ವಿಬಿ ಜಿ ರಾಮ್ ಜಿ ಜಾಗೃತಿಗಾಗಿ ಎಲ್ಲ ಕಡೆ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಇಡೀ ದೇಶವ್ಯಾಪಿ ಬೆಂಬಲವೂ ಅದಕ್ಕೆ ವ್ಯಕ್ತವಾಗಿದೆ. ಅದನ್ನು ವಾಪಸ್ ಪಡೆಯುವ ಸಂದರ್ಭ ಒದಗಿಬರಲಾರದು ಎಂದು ತಿಳಿಸಿದರು.
ಕಾಂಗ್ರೆಸ್ಸಿನವರು ದೇಶವಿರೋಧಿ ಚಟುವಟಿಕೆ ಮಾಡುತ್ತಾರೆ. ದೇಶಕ್ಕೇ ಅಪಮಾನ ಮಾಡುತ್ತಾರೆ ಎಂದು ಟೀಕಿಸಿದರು. ಹೆಣ್ಮಕ್ಕಳನ್ನು ಸಂಸತ್ತಿನಲ್ಲಿ ಎತ್ತಿಕಟ್ಟಿ ಪ್ರಧಾನಿಯವರ ಸ್ಥಾನಕ್ಕೂ ಅಪಚಾರ ಮಾಡಿದ್ದ ರಾಹುಲ್ ಗಾಂಧಿಯವರ ಬಗ್ಗೆ ಪ್ರಧಾನಮಂತ್ರಿಯವರು ಹೇಳಿದ್ದಾರೆ. ಎಐ ಸಮ್ಮಿಟ್ ಸಂದರ್ಭದಲ್ಲಿ ಬಟ್ಟೆ ಬಿಚ್ಚಿ ಓಡಾಡಿದವರ ಬಗ್ಗೆಯೂ ಮಾತನಾಡಿದ್ದಾರೆ. ಅವರಿಗೆ ಜನರು ಬೂಟ್, ಚಪ್ಪಲಿಯಲ್ಲಿ ಉತ್ತರ ಕೊಟ್ಟಿದ್ದಾರೆ ಎಂದು ನುಡಿದರು.
ಇದಕ್ಕಿಂತ ದೊಡ್ಡ ಗೌರವ ಕಾಂಗ್ರೆಸ್ಸಿಗೆ ಎಲ್ಲಿಂದ ಬರಲು ಸಾಧ್ಯ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಇವತ್ತು ಚಿಕ್ಕಬಳ್ಳಾಪುರದಲ್ಲಿ ಮತ್ತೆ ಮನ್ರೇಗಾ ಬೇಕೆಂದು ಹೋರಾಟ ಮಾಡಿದ್ದಾರೆ. ನಿನ್ನೆ ಶೃಂಗಸಭೆ ವಿರೋಧಿಸಲು ಎಷ್ಟು ಬಟ್ಟೆ ಬಿಚ್ಚಿಕೊಂಡಿದ್ದೀರೋ ಅದಕ್ಕಿಂತ ಹೆಚ್ಚು ಬಟ್ಟೆ ಬಿಚ್ಚಿಕೊಂಡರೂ ವಿಬಿ ಜಿ ರಾಮ್ ಜಿ ಯೇ ಊರ್ಜಿತವಾಗಲಿದೆ. ಇದರಿಂದ ಜನರಿಗೆ ಬಹಳ ಅನುಕೂಲ ಆಗುತ್ತಿದೆ ಎಂದು ತಿಳಿಸಿದರು.
ಅಭಿವೃದ್ಧಿ, ಅನ್ಯಾಯ ಸರಿಪಡಿಸುವ ಕೆಲಸ ಮಾಡಿ.
ವಿಬಿ ಜಿ ರಾಮ್ ಜಿ ಏನೆಂಬುದು ಜನರಿಗೆ ಗೊತ್ತಾಗಿದೆ. ನೀವು ಮಾಡಬೇಕಾದುದು ಅಭಿವೃದ್ಧಿ ಕೆಲಸಗಳು ಎಂದು ಹೇಳಿದರು. ಒಳ ಮೀಸಲಾತಿ ಸೃಷ್ಟಿ ಮಾಡಿದ್ದೀರಿ. ಆದರೆ, ಬೀದಿ ಬೀದಿಯಲ್ಲಿ ಜನರು ಹೋರಾಟಕ್ಕೆ ಇಳಿಯುವ, ಅವರವರ ಮಧ್ಯದಲ್ಲಿ ಜಗಳ ಹಚ್ಚುವ ಕೆಲಸ ಮಾಡಿದ್ದೀರಿ. ಇಂಥವುಗಳಿಗೆ ತೆರೆ ಎಳೆದು ಎಲ್ಲರೂ ಸಂತೋಷದಿಂದ ಒಪ್ಪಿಕೊಳ್ಳುವ ರೀತಿಯಲ್ಲಿ ನೀವು ಮಾಡಿ. ಇದೆಲ್ಲ ಬಿಟ್ಟು ಮನ್ರೇಗಾ ಹೋರಾಟ ಮಾಡಿದರೆ ಪ್ರಯೋಜನ ಆಗುವುದಿಲ್ಲ ಎಂದು ತಿಳಿಸಿದರು. ಅದು ಗಮನ ಬೇರೆಡೆ ಸೆಳೆಯುವ ತಂತ್ರ ಅಷ್ಟೇ ಎಂದರು.