ನವದೆಹಲಿ, ಫೆ. 24 (DaijiworldNews/AK): ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಕೇರಳ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಇಂದು ಅನುಮೋದಿಸಿದೆ.

ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕೇರಳಂ ಎಂಬ ಹೆಸರು ಮಲಯಾಳಂ ಮೂಲ ಭಾಷೆಯದ್ದಾದ್ದರಿಂದ ಇಂಗ್ಲಿಷ್ನ ಕೇರಳ ಎಂಬ ಹೆಸರಿನ ಬದಲು ಕೇರಳಂ ಬಳಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಕೇರಳದ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದೀಗ ಇದಕ್ಕೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆಯೂ ಸಿಕ್ಕಿದೆ. ಇನ್ನು ರಾಷ್ಟ್ರಪತಿಗಳ ಅನುಮೋದನೆ ಸಿಕ್ಕಿದರೆ ಕೇರಳ ರಾಜ್ಯದ ಹೆಸರು ಅಧಿಕೃತವಾಗಿ ಕೇರಳಂ ಎಂದು ಬದಲಾವಣೆಯಾಗುತ್ತದೆ.
ಕೇರಳ ರಾಜ್ಯದ ಹೆಸರಿನ ಬದಲಾವಣೆ ಸಾಂಸ್ಕೃತಿಕ ಮಹತ್ವವನ್ನೂ ಹೊಂದಿದೆ. ಮೂಲ ಹೆಸರಿನ ಬಳಕೆಯ ಮೂಲಕ ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವುದು, ಕೇರಳ ರಾಜ್ಯದ ಜನರ ಭಾವನೆಗಳಿಗೆ ಗೌರವ ನೀಡುವುದು ಇದರ ಮುಖ್ಯ ಉದ್ದೇಶ. ಭಾರತದ ಸಂವಿಧಾನದ ಪ್ರಕಾರ ರಾಜ್ಯದ ಹೆಸರನ್ನು ಬದಲಾಯಿಸಲು ಈಗಾಗಲೇ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆ ಅಂಗೀಕರಿಸಲಾಗಿದೆ. ಇದಕ್ಕೆ ರಾಷ್ಟ್ರಪತಿಯ ಅನುಮೋದನೆಯೊಂದು ಬಾಕಿ ಇದೆ.
ಮಲಯಾಳಂನಲ್ಲಿ ಕೇರಳಂ ಅಂದರೆ ‘ತೆಂಗಿನಕಾಯಿ ನಾಡು’ ಎಂದರ್ಥ. ‘ಕೇರಾ’ ಅಂದರೆ ತೆಂಗಿನಕಾಯಿ, ‘ಆಲಂ’ ಅಂದರೆ ನಾಡು ಅಥವಾ ಭೂಮಿ ಎಂದರ್ಥ. ಎರಡರನ್ನೂ ಸೇರಿಸಿ ಕೇರಳಂ(ತೆಂಗಿನಕಾಯಿ ನಾಡು) ಎಂದು ಕರೆಯಲಾಗುತ್ತದೆ. ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ತೆಂಗಿನಕಾಯಿಯನ್ನು ಬೆಳೆಯಲಾಗುತ್ತದೆ. ಕೇರಳ ಅನ್ನವುದು ಭೌಗೋಳಿಕ, ಸಾಂಸ್ಕೃತಿಕ ವೈಶಿಷ್ಟ್ಯವನ್ನು ಸೂಚಿಸುತ್ತದೆ.ಹೀಗಾಗಿ, ಕೇರಳ ಹೆಸರನ್ನು ಕೇರಳಂ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.