ಬೆಂಗಳೂರು, ಫೆ. 25 (DaijiworldNews/AA): ಇಡೀ ರಾಜ್ಯದಲ್ಲಿ ಹೊಸ ರಸ್ತೆಗಳನ್ನು ನಿರ್ಮಾಣ ಮಾಡದೇ, ಇರುವ ರಸ್ತೆಗಳನ್ನು ದುರಸ್ತಿ ಮಾಡದೇ ರಾಜ್ಯ ಸರ್ಕಾರ ಪ್ರತಿವರ್ಷ ಮಾಡಬೇಕಾದ ತನ್ನ ಕೆಲಸದಲ್ಲಿ ಬಹಳ ಹಿನ್ನಡೆ ಸಾಧಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಬೇರೆ ಉಸಾಬರಿ ಬಿಟ್ಟು ಈ ಕಡೆ ಗಮನ ಹರಿಸಲಿ. ಅವರು ಕೆಲಸ ಮಾಡದಿದ್ದರೆ ಮುಖ್ಯಮಂತ್ರಿಗಳು ಸಚಿವರ ರಾಜೀನಾಮೆ ಪಡೆಯಲಿ ಎಂದು ವಿಧಾನ ಪರಿಷತ್ ನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆಲವು ಜಿಲ್ಲೆಗಳಲ್ಲಿ ಒಂದೇ ಒಂದು ಕಿ.ಮೀ ರಸ್ತೆಯನ್ನು ಹೊಸದಾಗಿ ನಿರ್ಮಿಸಿಲ್ಲ. ಇರುವ ಒಂದೇ ಒಂದು ಕಿ.ಮಿ. ರಸ್ತೆಯನ್ನು ದುರಸ್ತಿ ಮಾಡಿಲ್ಲ. ಸಾವಿರಾರು ಕಿ ಮೀ ರಸ್ತೆ ದುರಸ್ತಿಗೆ ಬಾಕಿ ಇದೆ. ಇದರ ಬಗ್ಗೆ ಗಮನಹರಿಸಬೇಕಾದ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೇರೆ ಉಸಾಬರಿ ಮಾಡಿಕೊಂಡು ಮಾತನಾಡುತ್ತಾರೆ" ಎಂದರು.
"ಗ್ರಾಮೀಣ ಪ್ರದೇಶದ ವ್ಯಾಪ್ತಿಗೆ ಒಳಪಡುವ ರಸ್ತೆಗಳ ನಿರ್ವಹಣೆ ಮತ್ತು ದುರಸ್ತಿ ಮಾಡುವ ಇಲಾಖೆಯ ಅಂಕಿ ಅಂಶಗಳೇ ಎಲ್ಲವನ್ನು ಹೇಳುತ್ತವೆ. ರಾಜ್ಯದಲ್ಲಿರುವ ಗ್ರಾಮೀಣ ರಸ್ತೆಗಳ ಉದ್ದ 1,98,657.58 ಕಿ ಮೀ. ರಾಜ್ಯದಲ್ಲಿ ಒಟ್ಟು ನಿರ್ಮಾಣ ಆಗಿರೋದು 297 ಕಿ ಮೀ ಮಾತ್ರ. ಈ ರಸ್ತೆಗಳನ್ನು ಮಾಡೋದು, ದುರಸ್ತಿ ಮಾಡೋದು ಯಾವಾಗ ಪ್ರಿಯಾಂಕ್ ಖರ್ಗೆ ಅವರು?" ಎಂದು ಪ್ರಶ್ನಿಸಿದರು.
"ಗ್ರಾಮೀಣ ಭಾಗದಲ್ಲಿ ರಸ್ತೆ ಸರಿ ಇಲ್ಲದೆ ಶಕ್ತಿ ಯೋಜನೆ ಕೊಟ್ಟಿದ್ದೀರಿ. 1,800 ಹಳ್ಳಿಗಳಿಗೆ ಬಸ್ ಸಂಪರ್ಕ ತೆಗೆದಿದ್ದಾರೆ. ಯಾಕೆಂದರೆ ರಸ್ತೆ ಸರಿ ಇಲ್ಲ. ಹಾಗಿದ್ದ ಮೇಲೆ ಮತ್ತೆ ನಿಮ್ಮ ಶಕ್ತಿ ಯೋಜನೆಗೆ ಯಾವ ಶಕ್ತಿ ಬಂತು. ಇದನ್ನು ಹೇಗೆ ನೀವು ಸಮರ್ಥಿಸಿಕೊಳ್ಳುತ್ತೀರಿ. ಹಳ್ಳಿಗಳು ಉದ್ದಾರ ಹೇಗೆ ಆಗುತ್ತವೆ. ಹೆಣ್ಣು ಮಕ್ಕಳು ಎಲ್ಲಿಗೆ ಬಂದು ಬಸ್ ಹತ್ತಬೇಕು? ಫ್ರೀ ಅಂತಾ ಅವರೆಲ್ಲ ಪಟ್ಟಣದವರೆಗೆ ನಡೆಯಬೇಕಾ?" ಎಂದು ಕೇಳಿದರು.
"ರಾಜ್ಯದಲ್ಲಿ ರಸ್ತೆ ಅಪಘಾತಕ್ಕೆ ಪ್ರತಿ ದಿನ 31 ಜನ ಜನ ಸಾಯ್ತಾ ಇದ್ದಾರೆ. ರಸ್ತೆ ಸರಿ ಇಲ್ಲದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಏನನ್ನು ಈ ಸರ್ಕಾರದಿಂದ ನಿರೀಕ್ಷೆ ಮಾಡಬಹುದು. ಪಂಚಾಯತ್ ರಾಜ್ ಬಗ್ಗೆ ಇಷ್ಟೆಲ್ಲ ಮಾತನಾಡುವ ಸಚಿವರು ಇದಕ್ಕೆ ಉತ್ತರ ಕೊಡುವರೇ" ಎಂದು ಹೆಳಿದರು.
"ಮುಖ್ಯಮಂತ್ರಿಗಳೇ ಈ ಸಚಿವರು ನಿಮ್ಮ ಆಯ್ಕೆನಾ. ಅವರಿಂದ ಕೆಲಸವನ್ನು ಯಾಕೆ ಮಾಡಿಸುತ್ತಾ ಇಲ್ಲ. ಅವರು ಮಾಡದಿದ್ರೆ ನೀವು ಜವಾಬ್ದಾರಿ. ಅವರನ್ನು ಕೇಳುವ ಅಧಿಕಾರ ನಿಮಗೆ ಇದೆ. ಗ್ರಾಮೀಣ ಜನರಿಗೆ ಅನ್ಯಾಯ ಮಾಡ್ತಾ ಇದ್ದೀರಿ. ಹಣ ಎಲ್ಲಿ ಹೋಗಿದೆ. ಜನರಿಗೆ ಉತ್ತರ ಕೊಡಿ ಅವರ ರಾಜೀನಾಮೆ ಪಡೆದು ಬೇರೆಯವರನ್ನು ನೇಮಿಸಿ" ಎಂದು ಒತ್ತಾಯಿಸಿದರು.