ನವದೆಹಲಿ, ಮಾ. 12 (DaijiworldNews/ AK): ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಸದನದಲ್ಲಿ ಸೋತ ನಂತರ ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಮ್ಮ ಕರ್ತವ್ಯವನ್ನು ಪುನರಾರಂಭಿಸಿದ್ದಾರೆ.

ನಾನು ಯಾವುದೇ ಪಕ್ಷಪಾತ ಮಾಡಿಲ್ಲ ಎಂದಿರುವ ಓಂ ಬಿರ್ಲಾ, ಪ್ರತಿ ಸಂಸದರಿಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಸಿಗುವಂತೆ ನೋಡಿಕೊಳ್ಳಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ. ವಿರೋಧ ಪಕ್ಷದ ನಾಯಕರು ಸದನಕ್ಕಿಂತಲೂ ಮೇಲಲ್ಲ ಎಂದು ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ.
ನಿನ್ನೆ ವಿಪಕ್ಷದ ಅವಿಶ್ವಾಸ ನಿರ್ಣಯವು ಲೋಕಸಭೆಯಲ್ಲಿ ಸೋತಿತ್ತು. ಇದಾದ ಒಂದು ದಿನದ ನಂತರ, ಸ್ಪೀಕರ್ ಓಂ ಬಿರ್ಲಾ ಇಂದು (ಮಾರ್ಚ್ 12) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಥವಾ ಇತರ ಸದಸ್ಯರನ್ನು ಸದನದಲ್ಲಿ ಮಾತನಾಡದಂತೆ ತಡೆಯಲಾಗಿದೆ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ. ಪ್ರತಿಯೊಬ್ಬ ಸಂಸದರಿಗೂ ನಿಯಮಗಳ ಪ್ರಕಾರ ಮಾತನಾಡುವ ಹಕ್ಕಿದೆ. ನಾನು ಆ ಅವಕಾಶ ನೀಡಿದ್ದೇನೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಫೆಬ್ರವರಿ 13ರಂದು ಕೊನೆಗೊಂಡ ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ನೀಡಿದ ನಂತರ ಇಂದು ಓಂ ಬಿರ್ಲಾ ಮೊದಲ ಬಾರಿಗೆ ಸದನಕ್ಕೆ ಬಂದರು.